ಯಲ್ಲಾಪುರ: ಎಲ್ಲರಿಗೂ ಗೆಲುವು ಸಾಧ್ಯವಿಲ್ಲ. ಆದರೆ ಕಲಿತ ವಿದ್ಯೆಯಲ್ಲಿ ಜೀವನದುದ್ದಕ್ಕೂ ನಮ್ಮ ಜೊತೆ ಬರುತ್ತದೆ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರೈತ ಸಭಾಭವನದಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಹಾಗೂ ರಾಷ್ಟ್ರ ಮಟ್ಟದ ಕ್ವಾಡ್ ರೊಲರ್ ಸ್ಕೇಟಿಂಗ್ ಹಾಕಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ 38 ಕ್ರೀಡಾ ಪಟುಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
‘ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವವೂ ಅಗತ್ಯ. ಗುರು ಮತ್ತು ಗುರಿ ಇದ್ದರೆ ಸಾಧನೆ ಸಾಧ್ಯ.ಈ ಹಿನ್ನಲೆಯಲ್ಲಿ ಶಿಕ್ಷಣದ ಶಕ್ತಿಯ ಜೊತೆಗೆ ಕ್ರೀಡಾ ಸ್ಪೂರ್ತಿಯನ್ನು ನಿಮ್ಮಲ್ಲಿ ಬೆಳೆಸುತ್ತಿರುವ ತರಬೇತುದಾರ ದಿಲೀಪ ಹಣಬರ್ ಉತ್ತಮ ಗುರುವಾಗಿದ್ದಾರೆ. ಇನ್ನು ನಿಮ್ಮ ಲಕ್ಷ್ಯ ಗುರಿಯ ಕಡೆಗೆ ಇರಲಿ. ಕರ್ನಾಟಕವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಜಿಲ್ಲೆಗೆ ತಂದು ಕೊಟ್ಟಿರುವುದು ಸಂತಸ ತಂದಿದೆ. ಯಲ್ಲಾಪುರ ಮತ್ತು ಮುಂಡಗೋಡಿನಲ್ಲಿ ತರಬೇತಿಗೆ ಅಗತ್ಯವುಳ್ಳ ರಿಂಕ್ ಅಗತ್ಯತೆಯನ್ನು ಮುಂದಿನ ದಿನಗಳಲ್ಲಿ ಪೂರೈಸಿಕೊಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಘಟಕರ ಪರವಾಗಿ ಸಚಿವ ಶಿವರಾಮ ಹೆಬ್ಬಾರ್, ಹಾಗೂ ಮುಖ್ಯ ತರಬೇತುದಾರ ದಿಲೀಪ್ ಹಣಬರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವನಜಾಕ್ಷಿ ಶಿವರಾಮ್ ಹೆಬ್ಬಾರ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುನಂದಾ ದಾಸ್ ಹಾಗು ಉದ್ಯಮಿಗಳಾದ ಬಾಲಕೃಷ್ಣ ನಾಯಕ, ವಿಜಯ ಮಿರಾಶಿ, ಯಲ್ಲಾಪುರ ರೋಲರ್ ಸ್ಕೇಟಿಂಗ್ ಕ್ಲಬ್ ನ ಅಧ್ಯಕ್ಷ ಪ್ರಕಾಶ ಶೆಟ್, ಮುರಳಿ ಹೆಗಡೆ., ಕಿರಣಕುಮಾರ್, ರಮೇಶ್ ರಾವ್, ಪಿಸೈಐ ಸುರೇಶ ಯಳ್ಳೂರ ಉಪಸ್ಥಿತರಿದ್ದರು.
36 ವರ್ಷಗಳ ನಂತರ ಜಿಲ್ಲೆಗೆ ರಾಜ್ಯ ಮಟ್ಟದಲ್ಲಿ ಬಂಗಾರದ ಪದಕ ತಂದು ಕೊಟ್ಟ ಅನೂಪ್ ಲಿಖಿನ್ ಪ್ರಾರ್ಥಿಸಿದರು, ದಿಲೀಪ್ ಹಣಬರ್ ಪ್ರಾಸ್ತಾವಿಕ ಮಾತನ್ನಾಡಿದರು, ಶರೀಫ ಹಾರ್ಸಿಕಟ್ಟಾ ನಿರೂಪಿಸಿದರು, ಸತೀಶ ನಾಯ್ಕ, ಅಕ್ಷತಾ ನಾಯ್ಕ, ಸಮನ್ನಾದ ಬೇಗಂ ಸಹಕರಿಸಿದರು.