ಬೆಂಗಳೂರು: ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಛೋಪ್ರಾ ರವರಿಗೆ ತರಬೇತಿ ನೀಡಿದ್ದ ಉತ್ತರಕನ್ನಡದ ಶಿರಸಿಯ ಕಾಶೀನಾಥ ನಾಯ್ಕ ಬೆಂಗಳೆಗೆ ರಾಜ್ಯ ಸರ್ಕಾರ 10 ಲಕ್ಷ ಬಹುಮಾನ ಘೋಷಿಸಿದೆ.
ಭಾರತೀಯ ಸೇನೆಯಲ್ಲಿ ‘ಸುಬೇದಾರ್’ ಆಗಿರುವ ಪ್ರಸ್ತುಟ ಪುಣೆಯ ಸೇನೆಯ ಕ್ರೀಡಾ ಸಂಸ್ಥೆಯಲ್ಲಿ ತರಬೇತಿ ನೀಡುತ್ತಿರುವ ಕಾಶೀನಾಥ ನಾಯ್ಕರವರ ತರಬೇತಿಯಲ್ಲಿ ದೇಶದ ಅನೇಕ ಕ್ರೀಡಾಪಟುಗಳು ಹೊಳಪುಗೊಂಡಿದ್ದಾರೆ.
ಪ್ರಸ್ತುತ ತವರಿಗೆ ಬಂಗಾರ ತಂದಿರುವ ಚಿನ್ನದ ಹುಡುಗ ನೀರಜ್ ಛೋಪ್ರಾ ಕೂಡ 2015ರಲ್ಲೇ ಕಾಶೀನಾಥ ನಾಯ್ಕ್ ಬಳಿ ತರಬೇತಿಗೆ ಸೇರಿದ್ದರು. ಅವರ ತರಬೇತಿಯಿಂದಲೇ ಛೋಪ್ರಾ 2016ರಲ್ಲಿ ಜ್ಯೂನಿಯರ್ ವಿಭಾಗದಲ್ಲಿ 86.48 ಮೀ ಜಾವಲಿನ್ ಎಸೆದು ವಿಶ್ವ ದಾಖಲೆ ಮಾಡಿದ್ದರು.
ಅಲ್ಲದೇ 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವ ,ಹಾಗೂ ಭಾರತಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಪರೋಕ್ಷವಾಗಿ ಶ್ರಮ ಪಟ್ಟಿರುವ ಕಾಶೀನಾಥ್ ನಾಯ್ಕ್ ರವದ ಸಾಧನೆಯನ್ನು ಮೆಚ್ಚಿ ರಾಜ್ಯ ಸರ್ಕಾರ 10 ಲಕ್ಷ ರೂ.ನಗದು ಬಹುಮಾನ ಘೋಷಿಸಿದೆ.
ಈ ಕುರಿತು ಟ್ವೀಟ್ ಮೂಲಕ ಅವರಿಗೆ ಅಭಿನಂದಿಸಿರುವ ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆಯ ಸಚಿವ ಡಾ.ಕೆ.ಸಿ ನಾರಾಯಣ ಗೌಡ ಒಲಂಪಿಕ್ಸ್ ನಲ್ಲಿ ಅಮೋಘ ಸಾಧನೆ ಮಾಡಿದ 7 ಕ್ರೀಡಾಪಟುಗಳಿಗೆ ರಾಜ್ಯದ ವತಿಯಿಂದ ಸನ್ಮಾನ ಮಾಡಲಾಗುತ್ತದೆ. ಆ ಸಂದರ್ಭದಲ್ಲಿಯೇ ತರಬೇತುದಾರ ಕಾಶಿನಾಥ ನಾಯ್ಕ ಅವರಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.