ನವದೆಹಲಿ: ದೇಶದಲ್ಲಿ ಕೃಷಿ ಯಾಂತ್ರೀಕರಣ ಸಬ್ಸಿಡಿ ಯೋಜನೆಗಳಲ್ಲಿ ಪಾಲು ಪಡೆಯುವ ತಯಾರಕರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಎಂಆರ್ಪಿಯನ್ನು ಕಡ್ಡಾಯವಾಗಿ ನಮೂದು ಮಾಡುವಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಒಂದನ್ನು ಬಿಡುಗಡೆ ಮಾಡಿದೆ.
ಈ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದ್ದು, ಉಪಕರಣಗಳ ಮೇಲೆ ತಯಾರಕರು ಎಂಆರ್ಪಿ ಯನ್ನು ನಮೂದಿಸಬೇಕು. ರಾಜ್ಯ ಸರ್ಕಾರಗಳು ಕೃಷಿ ಇಲಾಖೆಯ ವೆಬ್ಸೈಟ್ನಲ್ಲಿ ಟ್ರ್ಯಾಕ್ಟರ್, ಟಿಲ್ಲರ್ಗಳಂತಹ ಉಪಕರಣಗಳ ಎಂಆರ್ಪಿಯನ್ನು ಪ್ರದರ್ಶನ ಮಾಡುವಂತೆ ನಿರ್ದೇಶಕರಿಗೆ ಸೂಚಿಸಬೇಕು. ಆ ಮೂಲಕ ರೈತರಿಗೆ ಅನುಕೂಲ ಒದಗಿಸಿಕೊಡಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ಇದನ್ನು ಇನ್ನೂ ಹಲವಾರು ರಾಜ್ಯಗಳಲ್ಲಿ ಅಳವಡಸಲಾಗಿಲ್ಲ. ಎಂಆರ್ಪಿಯನ್ನು ಎಂಪನಾಲ್ ಮಾಡುವ ತಯಾರಕರು ಮತ್ತು ವಿತರಕರು ಮಾತ್ರವೇ ಸಬ್ಸಿಡಿ ಪಡೆಯಲು ಅರ್ಹರಾಗಿರುತ್ತಾರೆ. ಎಲ್ಲಾ ರಾಜ್ಯಗಳು ಇದನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡುವುದಾಗಿ ಕರಂದ್ಲಾಜೆ ಹೇಳಿದ್ದಾರೆ. ಇದರಿಂದ ರೈತರಿಗೆ ಸಬ್ಸಿಡಿ ಉಪಕರಣಗಳನ್ನು ಖರೀದಿ ಮಾಡಲು ಅನುಕೂಲ ಆಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಅವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದೆ ಎಂದು ಕರಂದ್ಲಾಜೆ ತಿಳಿಸಿದ್ದಾರೆ. ಈಗಾಗಲೇ ಕೃಷಿ ಉಪಕರಣಗಳ ಖರೀದಿಗೆ 5490 ಕೋಟಿ ರೂ. ಸಹಾಯ ಧನ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಕರ್ನಾಟಕದ ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ 506 ಕೋಟಿ ರೂ. ನೀಡಲಾಗಿದೆ ಎಂದು ಕರಂದ್ಲಾಜೆ ತಿಳಿಸಿದ್ದಾರೆ.
ನ್ಯೂಸ್ 13