ಸಿದ್ದಾಪುರ: ತಾಲೂಕಿನ ಬಿಳಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ದಯಾನಂದ ಚಿನಿವಾರ ಅವರು ತಮ್ಮ ಕೆಲಸದಿಂದ ವಯೋನಿವೃತ್ತಿ ಹೊಂದಿದ ಕಾರಣ ಧಾರವಾಡ ಒಕ್ಕೂಟದ ಕಲ್ಯಾಣ ಸಂಘದ ವತಿಯಿಂದ ನೀಡಲಾಗುವ ಇಡಿಗಂಟು ಹಣದ ಚೆಕ್’ನ್ನು ಧಾರವಾಡ ಹಾಲು ಒಕ್ಕೂಟ ಹಾಗೂ ಕಲ್ಯಾಣ ಸಂಘದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದಯನಾಂದ ಚಿನಿವಾರ ಅವರು ತಮ್ಮ ಸುದೀರ್ಘ 33 ವರ್ಷಗಳ ಸೇವೆಯನ್ನು ಅತ್ಯಂತ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿ ಉಳಿದೆಲ್ಲ ಕಾರ್ಯನಿರ್ವಾಹಕರಿಗೆ ಮಾದರಿಯಾಗುವಂತೆ ನಡೆದುಕೊಂಡಿದ್ದು ಬಂದಿದ್ದಾರೆ. ತಮ್ಮ ನೇರ ನುಡಿ ಹಾಗೂ ಸಮಯಕ್ಕೆ ಸರಿಯಾದ ಸಲಹೆ ಸೂಚನೆಗಳನ್ನು ಅವರು ಯಾವಾಗಲೂ ತಮ್ಮ ಕಾರ್ಯಾವಧಿಯಲ್ಲಿ ನೀಡುತ್ತಾ ಬಂದು, ಸಂಘದ ಜೊತೆ ಮತ್ತು ಹಾಲು ಉತ್ಪಾದಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎಂದರು. ಹಾಗೂ ಬಿಳಗಿ ಸಂಘದ ಏಳಿಗೆಗೆ ತಮ್ಮ ಅಮೂಲ್ಯ ಸೇವೆಯೊಂದಿಗೆ ಸಂಘದ ಸರ್ವಾಂಗೀಣ ಪ್ರಗತಿಗೆ ಕಾರಣೀಕರ್ತರಾದ ದಯಾನಂದ ಚಿನಿವಾರ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಅವರ ಮುಂದಿನ ನಿವೃತ್ತಿ ಜೀವನ ನೆಮ್ಮದಿ ಹಾಗೂ ಸುಖಕರವಾಗಿರಲಿ ಎಂದು ಆಶಿಸಿದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಹಾಗೂ ಪಿ ವಿ ನಾಯ್ಕ ಅವರುಗಳು ದಯಾನಂದ ಅವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಿಳಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಿಷ್ಣು ಭಟ್, ಜಿಲ್ಲಾ ಮುಖ್ಯಸ್ಥ ಎಸ್ ಎಸ್ ಬಜೂರ್, ವಿಸ್ತರಣಾಧಿಕಾರಿ ಪ್ರಕಾಶ ಕೆ. ಪಶು ವೈದ್ಯಾಧಿಕಾರಿ ಡಾ. ರಾಕೇಶ ತಲ್ಲೂರ ಹಾಗೂ ಬಿಳಗಿ ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂಘದ ಸದರಿ ಸೇವಾ ನಿರತ ಕಾರ್ಯದರ್ಶಿ ನಾಗರಾಜ ನಾಯ್ಕ ಉಪಸ್ಥಿತರಿದ್ದರು.