ಮಂಗಳೂರು: ನನಗೆ ಅಭಿನಂದನೆ ಸಲ್ಲಿಸುವವರು, ಹಾರ-ತುರಾಯಿಗಳನ್ನು ತರಬೇಕೆಂದಿಲ್ಲ. ಬದಲಾಗಿ ಎನಾದರೊಂದು ಕೊಡಲೇಬೇಕೆಂದಿದ್ದರೆ ಒಳ್ಳೆಯ ಕನ್ನಡ ಪುಸ್ತಕ ತನ್ನಿ ಎಂದು ರಾಜ್ಯ ಸರ್ಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಹಾರದ ಬದಲಿಗೆ ಒಳ್ಲೆಯ ಪುಸ್ತಕ ನೀಡಿ, ಅದನ್ನು ಕಾರ್ಕಳದ ಗ್ರಂಥಾಲಯಕ್ಕೆ ನೀಡುತ್ತೇನೆ ಎಂದು ಅವರು ತಮ್ಮ ಫೇಸ್ಬುಕ್ ಮೂಲಕ ಬರೆದುಕೊಂಡಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಮತ್ತು ತಮ್ಮ ಕ್ಷೇತ್ರ ಕಾರ್ಕಳಕ್ಕೆ ಅವರು ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕರ್ತರು, ಹಿತೈಷಿಗಳು ಅಭಿನಂದನಾ ಸಮಾರಂಭಗಳಲ್ಲಿ ಕೊರೋನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆಯೂ ಅವರು ಸೂಚಿನೆ ನೀಡಿದ್ದು, ಆ ಮೂಲಕ ಸಹಕರಿಸುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ.
ಕೊರೋನಾ ನಿಯಮಾವಳಿಗಳ ಉಲ್ಲಂಘನೆ ಮೂಲಕ ಅಪಾಯಕ್ಕೆ ಆಹ್ವಾನ ನೀಡುವುದು ಬೇಡ. ವೈಯಕ್ತಿಕವಾಗಿಯೂ ಹಾರ, ತುರಾಯಿಗಳನ್ನು ನಾನು ಸ್ವೀಕರಿಸುವುದಿಲ್ಲ. ದಯಮಾಡಿ ಎಲ್ಲರೂ ಅರಿತುಕೊಂಡು ವ್ಯವಸ್ಥೆಯ ಜೊತೆಗೆ ಸಹಕರಿಸೋಣ ಎಂದು ಹೇಳುವ ಮೂಲಕ ಸುನಿಲ್ ಕುಮಾರ್ ಇತರರಿಗೂ ಮಾದರಿಯಾಗಿದ್ದಾರೆ.