ನವದೆಹಲಿ: ಕೇಂದ್ರ ಸರ್ಕಾರ ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಿಸಲು ದೇಶದಾದ್ಯಂತ ಇರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೋಲಾರ್ ಪ್ಯಾನಲ್ಗಳನ್ನು ಸ್ಥಾಪಿಸಲು ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೌರಶಕ್ತಿ ಉತ್ಪಾದನಾ ಸಾಮಥ್ರ್ಯ ಅನ್ವೇಷಣೆ, ಲಭ್ಯವಿರುವ ಸ್ಥಳಗಳಲ್ಲಿ ಸೋಲಾರ್ ಪ್ಯಾನಲ್ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಯಾವ ಪ್ರದೇಶಗಳು ನೆಡುತೋಪುಗಳು, ಹೆದ್ದಾರಿ ಸಂಬಂಧಿತ ಸೇವೆಗಳು, ಸೌರ ಫಲಕಗಳ ಅಳವಡಿಕೆಗೆ ಮೀಸಲಿಡಲಾಗಿಲ್ಲವೋ ಆ ಜಾಗಗಳನ್ನು ಹೊರತು ಪಡಿಸಿ ಲಭ್ಯ ಜಾಗಗಳಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಈ ಸಂಬಂಧ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇಂಧನ ದಕ್ಷತೆ ಸೇವೆಗಳ ಲಿಮಿಟೆಡ್ ಜೊತೆಗೆ ಎಂಒಯುಗೆ ಸಹಿ ಮಾಡಿದೆ ಎಂದು ಹೇಳಿದ್ದಾರೆ. ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಕಟ್ಟಡಗಳ ಮೇಲ್ಛಾವಣಿಗಳು, ಟೋಲ್ ಫ್ಲಾಜಾಗಳಲ್ಲಿ ಈ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಈಗಾಗಲೇ ಈಸ್ಟರ್ನ್ ಪೆರಿಪೆರಲ್ ಎಕ್ಸ್ಪ್ರೆಸ್ ವೇ, ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇ, ದುಹೈ ಇಂಟರ್ಚೇಂಜ್ (382 KWp capacity), ದಸ್ನಾ ಇಂಟರ್ ಚೇಂಜ್ ಮೊದಲಾದ ಪ್ರದೇಶದಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.