ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ನೆರೆ ಸಂತ್ರಸ್ತರಿಗೆ ಲಯನ್ಸ್ ಕ್ಲಬ್ ಶಿರಸಿ, ಅಕ್ಷಯ ಸೇವಾ ಪ್ರತಿಷ್ಠಾನ ಹಾಗು ಸ್ಥಳೀಯ ಗೆಳೆಯರ ಬಳಗದ ವತಿಯಿಂದ ಮನೆಕಟ್ಟಲು ಅಗತ್ಯವಿರುವ ಸಾಮಗ್ರಿಗಳು ಹಾಗೂ ಹಣಕಾಸು ಸಹಾಯ ಮಾಡಲಾಯಿತು.
ಗುರುವಾರ ಶಿರಸಿ ಲಯನ್ಸ ಸದಸ್ಯರುಗಳು, ಅಕ್ಷಯ ಸೇವಾ ಪ್ರತಿಷ್ಠಾನದವರು ಹಾಗೂ ಹಾರ್ಸಿಕಟ್ಟಾ ಸುತ್ತ ಮುತ್ತಲಿನ ಸಮಾನ ಮನಸ್ಸಿನ ಗೆಳೆಯರ ಬಳಗದವರ ಸಹಕಾರದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ನೆರೆ ಸಂತ್ರಸ್ಥ ಕುಟುಂಬದವರಿಗೆ ತಾತ್ಕಾಲಿಕವಾಗಿ ಮನೆ ಕಟ್ಟಿಕೊಳ್ಳಲು ಅತ್ಯಗತ್ಯವಿರುವ ಸುಮಾರು 1,40,000 ಮೌಲ್ಯದ ಜಿಂಕ್ ಶೀಟಗಳನ್ನು, 30,000 ಮೌಲ್ಯದ ತಾಡಪಾಲಗಳನ್ನು 6,500 ಮೌಲ್ಯದ ಎಲ್.ಇ.ಡಿ ಬಲ್ಬಗಳನ್ನು ವಿತರಿಸಿದರು.
ಹನ್ನೊಂದು ಕುಟುಂಬಗಳಿಗೆ ತಲಾ 2 ಸಾವಿರ ರೂಪಾಯಿಗಳನ್ನು ವಿತರಿಸಿ ಸಂಕಷ್ಟದಲ್ಲಿದ್ದ ಸಂತ್ರಸ್ತರಿಗೆ ಸಮಯೋಚಿತ ಸಹಾಯಹಸ್ತ ನೀಡಿ ಅವರೆಲ್ಲರ ಜೊತೆ ತಾವಿದ್ದೇವೆಎಂಬ ಸಂದೇಶವನ್ನು ನೀಡಿದರು.
ಈ ಕಾರ್ಯದಲ್ಲಿ ಗೆಳೆಯರ ಬಳಗದ ವತಿಯಿಂದ 96,000 ಲಯನ್ಸ ಸದಸ್ಯರ ವತಿಯಿಂದ 56,500 ಹಾಗೂ ಅಕ್ಷಯ ಸೇವಾ ಪ್ರತಿಷ್ಠಾನದ ವತಿಯಿಂದ 45,000 ವೆಚ್ಚ ಭರಿಸಲಾಗಿದೆ.
ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಲ. ಉದಯ ಸ್ವಾದಿ, ಕಾರ್ಯದರ್ಶಿ ವಿನಯಹೆಗಡೆ, ಕೋಶಾಧ್ಯಕ್ಷ ಅನಿತಾ ಜೊತೆಗೆ ಇತರ ಲಯನ್ಸ್ ಸದಸ್ಯರುಗಳು , ಅಕ್ಷಯ ಸೇವಾ ಪ್ರತಿಷ್ಠಾನದ ಪ್ರಮುಖರು, ಹಾರ್ಸಿಕಟ್ಟಾ ಗೆಳೆಯರ ಬಳಗದವರು ಭಾಗವಹಿಸಿದ್ದರು.
ಸರಕಾರದಿಂದ ಅಶ್ವಾಸನೆಯಂತೆ ಆ ಸಂತ್ರಸ್ತ ಕುಟುಂಬದವರಿಗೆ ಹೆಚ್ಚಿನ ಸಹಾಯ ಸಿಗುವಂತಾಗಲಿ, ಅಧಿಕಾರಿಗಳು ಈ ನಿಟ್ಟಿನಲ್ಲಿ ಅತೀ ಶೀಘ್ರವಾಗಿ ಕೆಲಸವನ್ನು ಕೈಗೆತ್ತಿಕೊಳ್ಳುವಂತಾಗಲಿ ಎಂದು ಆಶಿಸುತ್ತೇವೆ.
ಈ ಕಾರ್ಯಕ್ಕೆ ಸ್ಥಳೀಯರ ಸಹಕಾರ ಅಮೋಘವಾದದ್ದು ಎಂದು ಲಯನ್ಸ ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.