ಶಿರಸಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಇರುವಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇರುತ್ತದೆ. ಇಂದಿನ ಸರ್ಕಾರ ವಿರೋಧ ಪಕ್ಷದವರು ನೀಡಿದ ಸಲಹೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಿಜೆಪಿಯವರಂತೆ ಮೊಸಳೆ ಕಣ್ಣೀರು ಹಾಕದೆ ಪ್ರವಾಹ ಪೀಡಿತ ಜನರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ದೇಶಪಾಂಡೆಯವರು ತಮ್ಮ ಆಡಳಿತದಲ್ಲಿ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.
ಬಿಜೆಪಿಯ ಶಿಸ್ತು ವಾಜಪೇಯಿಯವರ ಕಾಲಕ್ಕೆ ಮುಗಿದು ಹೋಗಿದೆ, ಭಾರತೀಯ ಜನತಾ ಪಾರ್ಟಿ ಈಗ ಅಶಿಸ್ತಿನ ಮಹಾಕೂಪ ಆಗಿ ಪರಿವರ್ತನೆಯಾಗಿದೆ. ನಮ್ಮನ್ನು ಟೀಕಿಸಲು ಹಾಕುತ್ತಿರುವ ಶ್ರಮವನ್ನು ಬಿಜೆಪಿಯವರು ಜಿಲ್ಲೆಯ ಜನರ ಸಮಸ್ಯೆಯನ್ನು ಬಗೆಹರಿಸಲು ಹಾಕುವುದು ಸೂಕ್ತ ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರ ಓಡಾಟದಿಂದ ಬಿಜೆಪಿ ಗೆ ಭಯ ಪ್ರಾರಂಭವಾಗಿದೆ. ಕಾಂಗ್ರೆಸ್ ನನ್ನು ಟೀಕಿಸುವ ಮುನ್ನ ಬಿಜೆಪಿಗರು ತಮ್ಮ ಕಾಲುಬುಡವನ್ನು ನೋಡಿಕೊಳ್ಳಬೇಕು.
ಸಂಸದರು ನ್ಯಾನೋ ಟೆಕ್ನಾಲೋಜಿ ಮೂಲಕ ಎಲ್ಲಾ ಸಮಸ್ಯೆಗಳನ್ನು ಅರಿತಿರಬಹುದು. ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕರವರಿಗೆ ದೃಷ್ಟಿ ದೋಷವಿದೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿಗಳ ಪ್ರವಾಸದ ಕುರಿತಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲೆಗೆ ಆಗಮಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೆ ಧನ್ಯವಾದವನ್ನು ತಿಳಿಸುತ್ತೇವೆ. ಜಿಲ್ಲೆಗೆ ಘೋಷಿಸಿರುವ 200ಕೋಟಿ ಬಿಡುಗಡೆ ಯಾಗಿ ಆದಷ್ಟು ಬೇಗ ಬರಲಿ ಎಂದರು.
ಚುನಾವಣೆಯ ಕುರಿತಾಗಿ ಮಾತನಾಡಿದ ಅವರು ಹಳಿಯಾಳ ಕ್ಷೆತ್ರದ ಜನ ದೇಶಪಾಂಡೆ ಯವರನ್ನು ಕೈ ಬಿಡುವುದಿಲ್ಲ. ಜನರ ಮನಸ್ಸನ್ನು ಗೆದ್ದು ಪಕ್ಷ ಸಂಘಟನೆ ಮಾಡಲು ಹೊರಟಿದ್ದೇವೆ. ಟಿಕೇಟ್ ಆಕಾಂಕ್ಷಿಗಳು ಹಲವರಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಗೌಡ, ಮುಖಂಡರುಗಳಾದ ಬಸವರಾಜ್ ದೊಡ್ಮನಿ , ಕುಮಾರ್ ಜೋಶಿ ಸೋಂದಾ , ಗಣೇಶ ದಾವಣಗೆರೆ ಮುಂತಾದವರು ಉಪಸ್ಥಿತರಿದ್ದರು.