ಕುಮಟಾ: ಹೆಣ್ಣಿಗೆ ಗರ್ಭಿಣಿಯಾಗುವುದೆಂದರೆ ಜೀವನದ ಒಂದು ಅತೀ ರೋಮಾಂಚನದ ಕ್ಷಣ. ಅದರಲ್ಲೂ ಹೆರಿಗೆಯಾಗಿ ಮಗುವಿನ ಮುಖ ವೀಕ್ಷಿಸಿದರೆ ಆಗ ಆಕೆಗೆ ಸ್ವರ್ಗವೇ ಧರೆಗಿಳಿದಂತೆ. ಅಂತೆಯೇ, ತಾಯಿಯ ಎದೆ ಹಾಲು ಮಗುವಿಗೆ ಸಿಗುವ ಅತೀ ಶ್ರೇಷ್ಠ ನೈಸರ್ಗಿಕ ಆಹಾರವಾಗಿದ್ದು, ಹಲವಾರು ರೀತಿಯ ಅನಾರೋಗ್ಯದಿಂದ ಮಗುವನ್ನು ಕಾಪಾಡುತ್ತದೆ ಎಂದು ಸ್ತ್ರೀ ರೋಗ ತಜ್ಞೆ ಡಾ.ರೂಪಾಲಿ ಮಣಕೀಕರ ಅಭಿಪ್ರಾಯಪಟ್ಟರು.
ಇಲ್ಲಿನ ರೋಟರಿ ಕ್ಲಬ್, ಸರ್ಕಾರಿ ತಾಲೂಕಾಸ್ಪತ್ರೆ ಹಾಗೂ ಭಾರತೀಯ ವೈದ್ಯ ಸಂಘದ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು. ಎದೆ ಹಾಲು ರಕ್ತಕ್ಕೆ ವಿವಿಧ ರೀತಿಯ ರೋಗನಿರೋಧಕಗಳನ್ನು ಪೂರೈಸುತ್ತದೆ ಎಂದ ಅವರು, ಗರ್ಭಿಣಿ ಸ್ತ್ರೀಯರು ಹಾಗೂ ಹಾಲುಣಿಸುವ ತಾಯಂದಿರು ಕೋವಿಡ್ ಲಸಿಕೆ ಪಡೆಯಬಹುದೆಂದೂ ಅವರು ಸಲಹೆ ನೀಡಿದರು. ರೋಟರಿ ಅಧ್ಯಕ್ಷೆ ಡಾ.ನಮೃತಾ ಶಾನಭಾಗ ಮಾತನಾಡಿ, ತಾಯಿ ಮತ್ತು ಮಗುವಿನ ಆರೋಗ್ಯ ಕಾಳಜಿಗಾಗಿ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದರಲ್ಲದೇ, ಯಾವುದೇ ಆರೋಗ್ಯ ಸಂಬಂಧೀ ಕಾರಣಗಳಿಗಾಗಿ, ಸ್ವ-ಔಷಧಿ ಪ್ರಯೋಗ ಮಾಡದೇ, ವೈದ್ಯರ ಸಲಹೆಯನ್ನು ಪಡೆಯಬೇಕಾಗಿ ಸೂಚಿಸಿದರು.
ರೋಟರಿ ಕ್ಲಬ್ ಸರ್ಕಾರಿ ಆಸ್ಪತ್ರೆಯ ಆಧುನಿಕರಣಕ್ಕೆ ಕೈಜೋಡಿಸಿರುವ ಕ್ರಮವನ್ನು ಹಿರಿಯ ರೋಟೇರಿಯನ್ ಎಂ.ಬಿ.ಪೈ ತಿಳಿಸಿ, ಶೀಘ್ರದಲ್ಲಿಯೇ ರೋಟರಿ ವತಿಯಿಂದ ಬಸ್ನಿಲ್ದಾಣದ ಬಳಿ ಬ್ರೆಸ್ಟ್ ಫೀಡಿಂಗ್ ಸೆಂಟರ್ ಆರಂಭಿಸುವುದಾಗಿ ಪ್ರಕಟಿಸಿದರು. ಅಲ್ಲದೇ, ಸರ್ಕಾರಿ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೆ ಸಮನಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಐಎಂಎ ಅಧ್ಯಕ್ಷೆ ಡಾ.ನಾಗರತ್ನಾ ಪಟಗಾರ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಗರ್ಭಿಣಿ ಹಾಗೂ ತಾಯಂದಿರಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಸಹಕಾರ್ಯದರ್ಶಿ ಅಜಿತ ಭಟ್ಟ, ಜಯಶ್ರೀ ಕಾಮತ, ರೋಟರಿ ಸದಸ್ಯರಾದ ಡಾ.ನಿತೀಶ ಶಾನಭಾಗ, ಡಾ. ಸಚಿನ ನಾಯಕ, ಡಾ.ನಾಗರತ್ನಾ ಪಟಗಾರ, ದೀಪಾ ನಾಯಕ, ಡಾ.ಶ್ರೀದೇವಿ ಭಟ್ಟ, ಎನ್.ಆರ್.ಗಜು ಮೊದಲಾದವರು ಉಪಸ್ಥಿತರಿದ್ದು, ಸಹಕರಿಸಿದರು.
ಲಸಿಕೆ ನೀಡಿಕೆ: ರೋಟರಿ ಕ್ಲಬ್ ಮತ್ತು ಹೈಟೆಕ್ ಲೈಫ್ಲೈನ್ ಆಸ್ಪತ್ರೆಯ ಸಹಯೋಗದಲ್ಲಿ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮವು ಬಗ್ಗೋಣದ ಯುಕೆ ಬ್ಲಡ್ ಬ್ಯಾಂಕ್ ಹಾಲ್ನಲ್ಲಿ ನಡೆಯುತ್ತಿದೆ.