
ಶಿರಸಿ: ಜಿಲ್ಲೆಯಲ್ಲಿ ಉಂಟಾದ ನೈಸರ್ಗಿಕ ಅವಘಡವನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಸರ್ಕಾರ ಘೋಷಿಸಬೇಕು ಎಂದು ಹಸಿರು ಸ್ವಾಮೀಜಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಭೂಕುಸಿತ ಪ್ರವಾಹದ ಹಿನ್ನೆಲೆಯಲ್ಲಿ ಜು.31ರಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಡಳಿತ ಮಂಡಳಿಯ ತುರ್ತು ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಂಭವಿಸಿದ ಭಾರಿ ಪ್ರಕೃತಿ ಅವಘಡಗಳನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಸರ್ಕಾರ ಘೋಷಿಸಬೇಕು ನಾಶವಾದ ಮನೆಗಳನ್ನು ಬೇರೆ ಸ್ಥಳಗಳಲ್ಲಿ ಪುನರ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು,.
ತೋಟ-ಗದ್ದೆ ಸಂಪೂರ್ಣ ನಾಶವಾದ ರೈತರಿಗೆ ಬೇರೆ ಸ್ಥಳದಲ್ಲಿ ಕೃಷಿ ಜಮೀನು ನೀಡಬೇಕು ಹಾಗೂಸಂಪೂರ್ಣ ಕೃಷಿ ಭೂಮಿ ನಾಶವಾದ ರೈತರ ಸಾಲ ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಪೂಜ್ಯ ಸ್ವಾಮೀಜಿಗಳು ಒತ್ತಾಯಿಸಿದರು.
ರಸ್ತೆ ಪುನರ್ನಿರ್ಮಾಣ ಮಾಡಬೇಕಿದ್ದು ಮತ್ತಿಘಟ್ಟ-ಹಳವಳ್ಳಿ ರಸ್ತೆ ನಿರ್ಮಾಣ ಅತ್ಯವಶ್ಯಕವಾಗಿದೆ ಪ್ರವಾಹ, ಭೂಕುಸಿತ ಸಂತ್ರಸ್ತರಿಗೆ ಸಮಾಜ ನೆರವಿನ ಹಸ್ತ ಚಾಚಬೇಕಿದೆ ಎಂದು ಮನವಿಮಾಡಿದರು.
ಶ್ರೀ ಸ್ವರ್ಣವಲ್ಲೀ ಸಂಸ್ಥಾನ ಇನ್ನಷ್ಟು ಸೇವೆ ನೀಡಲು ನಿರ್ಧರಿಸಿದ್ದು ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಸ್ಥೆಗಳು, ಟಿ.ಎಸ್.ಎಸ್, ಟಿ.ಎಂ.ಎಸ್, ಕೆ.ಡಿ.ಸಿ.ಸಿ ಬ್ಯಾಂಕ್, ಉದ್ದಿಮೆಗಳು ಶ್ರೀ ಮಹಾಸಂಸ್ಥಾನದ ಜೊತೆ ಸೇವಾಕಾರ್ಯಕ್ಕೆ ನೆರವು ನೀಡಲು ಕರೆ ನೀಡಿದರು.
ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ
ಸಭೆಯಲ್ಲಿ ಶ್ರೀಮಠದ ವಿವಿಧ ಸೀಮಾ ಮುಖ್ಯಸ್ಥರು, ಶ್ರೀಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಉಪಸಮಿತಿಗಳ ಕಾರ್ಯಕರ್ತರು ತಮ್ಮ ಸೀಮೆಯಲ್ಲಿ ಆಗಿರುವ ಭೂಕುಸಿತ, ಪ್ರವಾಹ ಹಾನಿಯ ಕುರಿತಾಗಿ ವಿವರ ಮಂಡಿಸಿದರು. ಈಗಾಗಲೇ ಸ್ವರ್ಣವಲ್ಲೀ ಮಠದ ಅಂಗ ಸಂಸ್ಥೆಯಾದ ಹವ್ಯಕ ಜಾಗೃತಿ ಕಾರ್ಯಪಡೆಯಿಂದ ಹಳವಳ್ಳಿ,ಕಲ್ಲೇಶ್ವರ, ಕಳಚೆ,ಕೊಡ್ಲಗದ್ದೆ ಭಾಗಗಳಿಗೆ ಆಹಾರ ಧಾನ್ಯ, ವಸ್ತ್ರ,ಔಷಧ ವಿತರಣೆ ಮಾಡಲಾಗಿದ್ದು ಐ.ಎಂ.ಎ ಶಿರಸಿ ಸಹಯೋಗದೊಂದಿಗೆ ಮೆಡಿಕಲ್ ಕ್ಯಾಂಪ್ ಮಾಡಿದ ನೆರವಿನ ವಿವರ ನೀಡಲಾಯಿತು.
ಹಾನಿಯ ಕುರಿತು ಸಂಗ್ರಹ ವರದಿ ನೀಡಿದ ಮಠದ ಮುಖ್ಯ ಕಾರ್ಯದರ್ಶಿ ಎಸ್.ಎನ್.ಗಾಂವ್ಕಾರ್
ಕಳಚೆ ಪ್ರದೇಶದಲ್ಲಿ ಮನೆ ನೆಲಸಮವಾಗಿ 20 ಕುಟುಂಬಗಳು ಮನೆ ತೊರೆದಿದ್ದಾರೆ. ಇನ್ನೂ 30 ಮನೆಗಳು ಕುಸಿದು ಬೀಳುವ ಹಂತದಲ್ಲಿವೆ. ಇಲ್ಲಿನ 60 ಮನೆಗಳಿಗೆ ಯಾವುದೇ ನಾಗರಿಕ ಸೌಲಭ್ಯ ಇಲ್ಲವಾಗಿದೆ. ರಸ್ತೆ, ವಿದ್ಯುತ್, ನೀರು, ದೂರವಾಣಿ ಸಂಪರ್ಕ ಕಡಿದಿದೆ. ಹಳವಳ್ಳಿ, ಸುಂಕಸಾಳ, ಆಚವೆ, ಹಿಲ್ಲೂರು ಹಳ್ಳಿಗಳ ಕೃಷಿಕಾರ್ಮಿಕರ 300 ಮನೆಗಳು ಹಾನಿಗೆ ಒಳಗಾಗಿವೆ. ಬಾಳೂರು,ಕರೂರು,ಮತ್ತೀಘಟ್ಟ ಪ್ರದೇಶದಲ್ಲಿ ಹತ್ತು ಮನೆಗಳು ನಾಶವಾಗಿವೆ. ಸುಮಾರು 25 ಎಕರೆ ತೋಟ ನೆಲಸಮವಾಗಿದೆ. ಕಳಚೆ ಸೇರಿದಂತೆ ಯಲ್ಲಾಪುರ, ಸಿದ್ದಾಪುರ, ಶಿರಸಿ ಪ್ರದೇಶಗಳ ಐದುನೂರು ಎಕರೆಗಿಂತಲೂ ಹೆಚ್ಚು ಅಡಿಕೆ ತೋಟಗಳು ಸಂಪೂರ್ಣ ನಾಶವಾಗಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ ಸರ್ಕಾರಕ್ಕೆ ಭೂಕುಸಿತ ಅಧ್ಯಯನ ಸಮಿತಿ ಎಪ್ರಿಲ್ ನಲ್ಲಿ ವರದಿ ಸಲ್ಲಿಸಿದ್ದು ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ತಾಲೂಕುಗಳ ಸೇರ್ಪಡೆಯಾಗಿದೆ. ಕೃಷಿಭೂಮಿ ಸಂಪೂರ್ಣ ನಾಶವಾಗಿದ್ದಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದರು.
ಆಡಳಿತ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಮಾತನಾಡಿ ಸರ್ಕಾರ ನೆರವು ಘೋಷಿಸಿದೆ. ಇನ್ನಷ್ಟು ಹಾನಿ ವಿವರ ಸೇರ್ಪಡೆಯಾಗಬೇಕಿದ್ದು ಪುನರ್ವಸತಿ ಬಗ್ಗೆ ಇನ್ನಷ್ಟು ಒತ್ತಡ ತರಬೇಕಿದೆ ಈ ಕುರಿತು ರಾಷ್ಟ್ರದ ಗಮನ ಸೆಳೆಯಬೇಕು ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಸ್ವಾಗತಿಸಿ ಜಿ.ವಿ ಹೆಗಡೆ ವಂದಿಸಿದರು. ವೆಂಕಟರಮಣ ಬೆಳ್ಳಿ, ಗಂಗಾಧರ ಕಡಕಿನಬೈಲು, ಸೀತಾರಾಮ ನೀರ್ನಳ್ಳಿ, ಎನ್.ಕೆ ಭಟ್ಟ ಅಗ್ಗಾಶಿಕುಂಬ್ರಿ,ಡಿ ಶಂಕರ ಭಟ್ಟ, ಸದಾನಂದ ಹಳವಳ್ಳಿ ಇನ್ನಿತರರು ಮಾತನಾಡಿದರು.
ಶ್ರೀ ಸ್ವರ್ಣವಲ್ಲೀ ಸಂಸ್ಥಾನದ ಪ್ರವಾಹ ಭೂಕುಸಿತ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ನೀಡುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕೋರಲಾಗಿದೆ. ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ಕರ್ನಾಟಕ ಬ್ಯಾಂಕ್ ಶಿರಸಿ ಶಾಖೆ ಉಳಿತಾಯ ಖಾತೆ ಸಂಖ್ಯೆ- 7072500100707001 ಐಎಫ್ಎಸ್ಸಿ ಸಂಖ್ಯೆ- ಕೆಎಆರ್ಬಿ-0000707
ದೇಣಿಗೆ ನೀಡುವವರು ತಮ್ಮ ಹೆಸರು ವಿಳಾಸ ಫೋನ್ ನಂಬರ್ ಮುಂತಾದ ವಿವರಗಳನ್ನು ನೀಡಬೇಕು ಎಂದು ತಿಳಿಸಲಾಗಿದೆ.
ಸಂಪರ್ಕ: 08384296555, 279311 ,9483481359