
ಮುಂಡಗೋಡ: ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಲೊಯೋಲಾ ಕೇಂದ್ರದ ನಿರ್ದೇಶಕ ಜೇರಾಲ್ಡ್ ಡಿಸೋಜಾ ಹೇಳಿದರು.
ಅವರು ರಾಷ್ಟ್ರೀಯ ನ್ಯಾಯ ದಿನದ ಪ್ರಯುಕ್ತ ಲೊಯೋಲ ವಿಕಾಸ ಕೇಂದ್ರದ ಸಂಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರ್ರಾಸ್ಥಾವಿಕವಾಗಿ ಮಾತನಾಡಿದರು.
ನಮ್ಮ ದೇಶದಲ್ಲಿ ಈ ಸಮಯದಲ್ಲಿ ಬಡವರಿಗೆ ನ್ಯಾಯ ದೊರಕುವುದು ಬಹಳ ಕಷ್ಟ. ಇಂತಹ ಸಮಯದಲ್ಲಿ ನಾವು ಕಣ್ಣಿದ್ದು ಕುರುಡರಾಗಬಾರದು. ಬಡ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾವು ಮುಂದಾಗಬೇಕು. ಪ್ರಸ್ತುತವಾಗಿ ದೇಶದಲ್ಲಿ ಸುಮಾರು 3.5 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ ಹಾಗಾಗಿ ನಾವು ನ್ಯಾಯಕ್ಕಾಗಿ ನಮ್ಮ ದ್ವನಿ ಎತ್ತಬೇಕು ಎಂದರು.
ಲೊಯೋಲ ಸಮೂಹ ಸಂಸ್ಥೆಗಳ ಮುಖ್ಯಸ್ಥ ಪ್ರಾನ್ಸಿಸ್ ಮೆನೇಜಸ್ ಮಾತನಾಡಿ, ನ್ಯಾಯಕ್ಕಾಗಿ ಮಾಡುವ ಕಾರ್ಯಕ್ರಮಗಳು ಕೇವಲ ಲೊಯೋಲ ವಿಕಾಸ ಕೇಂದ್ರ ಸಿಬ್ಬಂದಿಗಳೊಂದಿಗೆ ನಡೆಯದೇ ಎಲ್ಲ ಸಮೂಹದವರು ಸೇರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಹಾಗೂ ನ್ಯಾಯಕ್ಕಾಗಿ ನಮ್ಮ ಒಲವು ಒಂದು ದಿನಕ್ಕೆ ಮಾತ್ರ ಸಿಮಿತವಾಗಿರದೇ ನಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದರು.
ಹ್ಯಾರಿ ನೆಯೊಲ್ ಅವರು ಉಪನ್ಯಾಸವನ್ನು ನೀಡಿ, ಸರ್ಕಾರದ ಮೂರು ಅಂಗಗಳಾದ ಕಾರ್ಯಾಂಗ ನ್ಯಾಯಾಂಗ ಮತ್ತು ಶಾಸಕಾಂಗ ಸಂವಿಧಾನ ವಿಧಿಗಳ ಮೇಲೆ ನಿಂತಿವೆ ಯಾವುದೆ ಸರ್ಕಾರವಾಗಲಿ ದೇಶದಲ್ಲಿ ಆದೇಶಗಳನ್ನು ಹೊರಡಿಸಿದಾಗ ಅದು ಸಂವಿಧಾನದ ವಿರುದ್ಧವಾಗಿದ್ದರೆ ನಾವು ಒಪ್ಪಿಕೊಳ್ಳಬಾರದು ಸರ್ಕಾರದ ವಿರುದ್ದ ನ್ಯಾಯಕ್ಕಾಗಿ ನಿಲ್ಲಬೇಕು ಎಂದು ಮಾತನಾಡಿದರು ಮತ್ತು ಸಂವಿದಾನವು ದೇಶದ ಎಲ್ಲ ವರ್ಗದ ಜನರಿಗೆ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ತಾರತಮ್ಯ ಮಾಡದೆ ಸಮಾನವಾಗಿ ಒದಗಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜುಲೈ 5ರಂದು ಮಡಿದ ಮಾನವ ಹಕ್ಕು ಹೋರಾಟಗಾರ ದಿವಂಗತ ಸ್ಟ್ಯಾನ ಸ್ವಾಮಿಯವರನ್ನು ನೆನೆದು ಪುಷ್ಪನಮನಗಳ ಶೃದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಜರತ್, ರೀಟಾ ಮತ್ತು ಮಂಗಳಾ ಪ್ರಾರ್ಥಿಸಿದರು. ನಾಗರಾಜ ಬಾರ್ಕಿ, ಛಾಯಪ್ಪಾ ಲಕ್ಷ್ಮಣ ಹಾಗೂ ತುಂಗಾ ನಾಯ್ಕ ಅವರು ನಿರ್ವಹಿಸಿದರು. ಮಲ್ಲಮ್ಮ ನಿರಲಗಿ, ಲಕ್ಷ್ಮಣ ಮೂಳೆ ಹಾಗೂ ಎಲ್.ವಿ.ಕೆ ಸಂಸ್ಥೆಯ ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು.