ಮುಂಡಗೋಡ: ಶಾಲಾ ಮಕ್ಕಳ ಬ್ಯಾಂಕ್ ಖಾತೆ ತೆರಯಲು ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ ಬ್ಯಾಂಕಿನ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ನಿರಾಕರಿಸುತ್ತಿದ್ದು ಇದಕ್ಕೆ ಸರಿಯಾದ ಉತ್ತರ ನೀಡುವಂತೆ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದಿಂದ ಬ್ಯಾಂಕಿನ ವ್ಯವಸ್ಥಾಪಕರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ತಾಲೂಕಿನ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ತಮ್ಮ ಬ್ಯಾಂಕಿನ ಖಾತೆಯನ್ನ ತೆರೆಯಲು ಬಂದಾಗ ಖಾತೆಯನ್ನು ತೆರೆಯಲು ನಿರಾಕರಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿತು. ಈ ಬಗ್ಗೆ ಕೇಳಲು ಸಂಘದ ಅಧ್ಯಕ್ಷರು ಬ್ಯಾಂಕಿಗೆ ಬಂದಾಗ ಬ್ಯಾಂಕಿನ ಸಿಬ್ಬಂದಿ ಮನೋಜ ಶಾಸ್ತ್ರಿ ಎಂಬವರು ಅಧ್ಯಕ್ಷರ ಜೊತೆ ವಾಗ್ವದ ನಡೆಸಿ ಲಿಖಿತವಾಗಿ ಆಂಗ್ಲ ಭಾಷೆಯಲ್ಲಿ ನಿರಾಕರಣೆ ಪತ್ರವನ್ನು ಪೂರೈಸಿದ್ದಾರೆ.
ರಾಜ್ಯ ಸರ್ಕಾರ ಯೋಜನೆಗಳನ್ನು ವಿಫಲಗೊಳಿಸಿರುತ್ತಿರಿ ಇದು ಶಾಲಾ ಮಕ್ಕಳಿಗೆ ಮಾಡುತ್ತಿರುವ ಅಪರಾಧವಲ್ಲವೇ? ಎಲ್ಲಾ ತಮ್ಮ ಬ್ಯಾಂಕಿನ ಸಮಸ್ಯೆಗಳು ಇತ್ಯರ್ಥವಾಗುವವರೆಗೆ ಯಾಕೆ ತಾವು ತಮ್ಮ ಶಾಖೆಯನ್ನು ಮುಚ್ಚಬಾರದು? ಉಲ್ಲೇಖ ಪತ್ರವನ್ನು ಆಂಗ್ಲ ಭಾಷೆಯಲ್ಲಿ ನೀಡಿರುತ್ತೀರಿ. ಇದು ಕರ್ನಾಟಕ ರಾಜ್ಯ. ಇಲ್ಲಿನ ಆಡಳಿತ ಭಾಷೆ ಕನ್ನಡ. ಪತ್ರದ ರಬ್ಬರ ಮುದ್ರೆಯಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳು ಇವೆ. ಇಲ್ಲಿನ ಕಾನೂನು ಮತ್ತು ಭಾಷೆಗಳನ್ನು ಗೌರವಿಸಿ ಕನ್ನಡ ಭಾಷೆಯಲ್ಲಿ ವ್ಯವಹರಿಸಿ. 18 ವರ್ಷ ಒಳಗಿನ ಮಕ್ಕಳಿಗೆ ಖಾತೆಯನ್ನು ತೆರೆಯಲು ಪಾನ್ ಕಾರ್ಡ್ ಕಡ್ಡಾಯ ಎಂದು ಹೇಳುತ್ತಿದ್ದಿರಿ. ಈ ಮಕ್ಕಳು ಶಾಲಾ ವಿದ್ಯಾರ್ಥಿಗಳಾಗಿದ್ದು ಯಾವದೇ ಹಣಕಾಸು ವ್ಯವಹಾರ ಮತ್ತು ವ್ಯಾಪಾರ ಮಾಡುವುದಿಲ್ಲ. ಮಕ್ಕಳಿಗೆ ಪಾನ್ ಕಾರ್ಡ್ ಪಡೆಯಲು 150-200ರೂ ಹಣವನ್ನು ಖರ್ಚು ಮಾಡುವ ಅಗತ್ಯವಿದೆ. ಇದು ಬಡ ಶಾಲಾ ಮಕ್ಕಳಿಗೆ ಹೊರೆ ಮತ್ತು ಅನಗತ್ಯ ಸಮಯದ ವಿಳಂಬಕ್ಕೆ ಕಾರಣವಾಗಿದೆ ಅಲ್ಲದೇ ಕೋವಿಡ್-19 ಭೀತಿ ಹೆಚ್ಚಾಗಿರುವ ಈ ಸಮಯದಲ್ಲಿ ಮಕ್ಕಳು ಮತ್ತು ಅವರ ಪಾಲಕರು ಪಾನ್ ಕಾರ್ಡ್ ಮಾಡಿಸಲು ಅನಗತ್ಯವಾಗಿ ಹೊರೆಗೆ ಓಡಾಡಿ ಸೋಂಕನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದ್ದು, ಇದಕ್ಕೆ ತಾವುಗಳೆ ಕಾರಣವಾಗಿರುತ್ತಿರಿ. ಈ ಎಲ್ಲಾ ಪ್ರಶ್ನಗಳಿಗೆ ಲಿಖಿತವಾಗಿ ಉತ್ತರವನ್ನು ನೀಡಬೇಕೆಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ರಮೇಶ ಅಂಬಿಗೇರ, ಶಂಕರ ನಾಯ್ಕ, ದಾಸಪ್ಪ ಎ, ಸಿದ್ಧಾರೂಡ ಶಾಬಾನಿ, ಪರಶುರಾಮ ಕೆ, ಗೋಪಾಲ ಕನಸೆ ಮುಂತಾದವರು ಉಪಸ್ಥಿತರಿದ್ದರು.