
ಅಂಕೋಲಾ: ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅಗಸ್ಟ್ 2ರಂದು ಉತ್ತರಕನ್ನಡಕ್ಕೆ ಆಗಮಿಸಲಿದ್ದು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಹಾಗೂ ಸಂತ್ರಸ್ತರ ಸಮಸ್ಯೆ ಆಲಿಸಲಿದ್ದಾರೆ .
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮಾಜಿ ಶಾಸಕ ಸತೀಶ್ ಸೈಲ್ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಯವರು ಅಗಸ್ಟ್ 2 ರಂದು ಪ್ರವಾಹದಿಂದ ಹಾನಿಗೊಳಗಾದ ಅಂಕೋಲಾ ಮತ್ತು ಕಾರವಾರ ತಾಲೂಕಿನ ಪ್ರದೇಶಗಳಲ್ಲಿ ಸಂಚರಿಸಿ ಸಮಸ್ಯೆ ಆಲಿಸಲಿದ್ದಾರೆ.
ಆಗಸ್ಟ್ 1ರಂದು ಆಗಮಿಸಿ ಕಾರವಾರದಲ್ಲಿ ವಾಸ್ತವ್ಯ ಮಾಡಲಿರುವ ಅವರು ಆಗಸ್ಟ್ 2ರಂದು ಕದ್ರಾ, ಹಣಕೋಣ, ಗೋಟೆಗಾಳಿ, ಘಡಸಾಯಿ ಪ್ರದೇಶಗಳಲ್ಲಿ
ಜನರ ಅಹವಾಲು ಸ್ವೀಕರಿಸಿ ಕೆಪಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಮಲ್ಲಾಪುರಕ್ಕೆ ಭೇಟಿ ನೀಡಿ ಪರಿಹಾರಕ್ಕಾಗಿ ಅಣುಸ್ಥಾವರದ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
ಮಧ್ಯಾಹ್ನ ಅಂಕೋಲಾಕ್ಕೆ ತೆರಳಿ ಶಿರೂರು, ವಾಸರ ಕುದ್ರಿಗೆ ಪ್ರದೇಶಗಳಿಗೆ ಭೇಟಿ ನೀಡಿ ಅಂಕೋಲಾ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ಪರಿಹಾರ ವಿತರಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದು ನಂತರ ನಾಡವರ ಸಭಾ ಭವನದಲ್ಲಿ ನೆರೆ ಪೀಡಿತ ಜನರ ಅಹವಾಲು ಸ್ವೀಕರಿಸಲಿದ್ದಾರೆ.
ನೆರೆ ಪೀಡಿತ ಪ್ರದೇಶಗಳಾದ ಡೋಂಗ್ರಿ, ಸುಂಕಸಾಳ, ಹಿಲ್ಲೂರ,ಮೊಗಟಾ,ಅಚವೆ, ಶೆಟಗೇರಿ, ಬೆಳಸೆ, ವಾಸರೆ, ಹೊನ್ನೆಬೈಲ್, ಅಗ್ರಗೋಣ ಹಾಗೂ ನೆರೆಯಿಂದ ಸಂಕಷ್ಟಕ್ಕೊಳಗಾದ ಎಲ್ಲಾ ಗ್ರಾ.ಪಂ ವ್ಯಾಪ್ತಿಯ ಜನರು ಹಾಗೂ ನದಿ ತೀರದ ನಿವಾಸಿಗಳು ಈ ತಮ್ಮ ಅಹವಾಲುಗಳನ್ನು ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.