ದಾಂಡೇಲಿ:ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಜೀವನ ಅರಿವು ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಬಂಗೂರನಗರ ಜ್ಯೂನಿಯರ್ ಕಾಲೇಜಿನ ಹಿರಿಯ ಉಪನ್ಯಾಸಕಿ ಪ್ರತಿಭಾ ದೇಶಪಾಂಡೆ ಭಾಗವಹಿಸಿ, ಕಾರ್ಯಗಾರವನ್ನು ಉದ್ಘಾಟಿಸಿದರು.
ನಂತರ ಮಾತನಾಡಿ, ಮನುಷ್ಯ ಜೀವನದ ಅತ್ಯಂತ ಮಹತ್ವಪೂರ್ಣ ಹಾಗೂ ಭವಿಷ್ಯ ರೂಪಿಸುವ ಘಟ್ಟವೇ ವಿದ್ಯಾರ್ಥಿ ಜೀವನ. ಭವಿಷ್ಯತ್ತಿನ ಉನ್ನತಿಗಾಗಿ ಹಾಗೂ ಈ ಸಮಾಜದ ಪ್ರಜ್ಞಾವಂತ ನಾಗರಿಕನಾಗಿ ರೂಪುಗೊಳ್ಳಬೇಕಾದರೆ ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಕಲಿಕೆ ಕೇವಲ ಜ್ಞಾನಮಟ್ಟವನ್ನು ಸುಧಾರಿಸುವುದಕ್ಕಾಗಿ ಮಾತ್ರವಲ್ಲ. ಕೌಶಲ್ಯವನ್ನು ಕರಗತ ಮಾಡಿಕೊಳ್ಳಲು, ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಲು ಹಾಗೂ ಉನ್ನತವಾದ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಲು ಶಿಕ್ಷಣ ಅತೀ ಮುಖ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡಿರಬೇಕು. ಇಟ್ಟುಕೊಂಡ ಗುರಿ ಸಾಧನೆಗೆ ನಿರಂತರವಾಗಿ ಪ್ರಯತ್ನಶೀಲರಾದಾಗ, ಅಂದುಕೊಂಡ ಗುರಿ ಸಾಧಿಸಲು ಸುಲಭ ಸಾಧ್ಯ. ಇಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕಾಗಿದೆ ಮತ್ತು ಸಾಮಾಜಿಕವಾದ ಪ್ರಜ್ಞಾವಂತಿಕೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಸದ್ವಿಚಾರ, ಸದ್ಚಿಂತನೆಗಳನ್ನು ಮೈಗೂಡಿಸಿ, ಸತತ ಅಧ್ಯಯನಶೀಲರಾಗಿ ನಾಡು ಕಟ್ಟುವ ಸೇನಾನಿಗಳಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಕಿರಣ್ಕುಮಾರ್ ಕೆ., ಶೈಕ್ಷಣಿಕ ಚಟುವಟಿಕೆಯ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಹೆಚ್ಚಿನ ಒತ್ತು ನೀಡಬೇಕಾಗಿದೆ. ಉತ್ತಮ ಶಿಕ್ಷಣ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಉತ್ತಮ ವ್ಯಕ್ತಿತ್ವ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡುತ್ತದೆ ಎಂದರು.
ಉಪನ್ಯಾಸಕಿ ಸುಧಾ ಅಮ್ಮಣ್ಣ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಹಿರಿಯ ಉಪನ್ಯಾಸಕ ಧರ್ಮೇಂದ್ರ ರಾಜಾಂಗಣೆ, ಆಡಳಿತಾಧಿಕಾರಿ ವಾಸುದೇವ ಮಿರಾಶಿ, ಗ್ರಂಥಪಾಲಕಿ ಲತಾ ಭಟ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.