ಜೊಯಿಡಾ: ಶಾಲಾ ಮಕ್ಕಳು ಹತ್ತುತ್ತಿರುವಾಗಲೇ ಸಾರಿಗೆ ಬಸ್ ಚಾಲಕ ಬಸ್ಸನ್ನು ಚಲಾಯಿಸಿ ಮಕ್ಕಳನ್ನು ಬಿಟ್ಟು ಹೋದ ಘಟನೆ ತಾಲೂಕಿನ ರಾಮನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸಮಯಕ್ಕೆ ಸರಿಯಾಗಿ ಯಾವ ಹಳ್ಳಿಗಳಿಗೂ ಸಾರಿಗೆ ಬಸ್ ಗಳು ಸಾಗುವುದಿಲ್ಲ. ಅಂಥದರಲ್ಲಿ ಬರುವ ಬಸ್ ಗಳು ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳದೇ ಸಾಗುತ್ತಿರುವುದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆಯನ್ನುಂಟು ಮಾಡಿದೆ. ರಾಮನಗರ ಬಸ್ ನಿಲ್ದಾಣಕ್ಕೆ ಬರುವ ಬೆಳಗಾವಿ- ದಾಂಡೇಲಿ ಸೇರಿದಂತೆ ಇನ್ನೂ ಕೆಲವು ಬಸ್ಸುಗಳು ರಾಮನಗರ ನಿಲ್ದಾಣದಲ್ಲಿ ನಿಂತರೂ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳುತ್ತಿಲ್ಲ. ಶಾಲಾ ಮಕ್ಕಳು ಪಾಸ್ ತೆಗೆದುಕೊಂಡು ಹೋಗುವ ಕಾರಣಕ್ಕೆ ಬಸ್ಸ್ ಹತ್ತಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಜೊಯಿಡಾ ತಾಲೂಕು ಹಳ್ಳಿಗಳಿಂದ ಮತ್ತು ದಟ್ಟವಾದ ಕಾಡಿನಿಂದ ಕೂಡಿದ ಪ್ರದೇಶ. ಇಲ್ಲಿ ಶಾಲೆಗೆ ಬರುವ ಮಕ್ಕಳು ಹತ್ತಾರು ಕಿ.ಮೀ. ನಡೆದೆ ಶಾಲಾ- ಕಾಲೇಜಿಗೆ ಬರಬೇಕು. ಅಂಥದರಲ್ಲಿ ಸಾರಿಗೆ ಅಧಿಕಾರಿಗಳು ಮತ್ತು ಚಾಲಕ- ನಿರ್ವಾಹಕರು ಶಾಲಾ ಮಕ್ಕಳನ್ನು ಬಸ್ಸಿನೊಳಗೆ ಹತ್ತಿಸಿಕೊಳ್ಳದೆ ದರ್ಪ ತೋರುತ್ತಿರುವುದು ಬೇಸರದ ಸಂಗತಿಯಾಗಿದೆ. ಜೊಯಿಡಾ ಸಮಸ್ಯೆಗಳಿಂದಲೇ ಕೂಡಿದ ತಾಲೂಕಾಗಿದ್ದು, ಅದರಲ್ಲೂ ರಾಮನಗರ ಭಾಗದಲ್ಲಿ ರಸ್ತೆಗಳು ಸರಿಯಿಲ್ಲದ ಕಾರಣ ನಡೆದುಕೊಂಡೆ ಹೋಗುವ ಪರಿಸ್ಥಿತಿ ಕೆಲ ಮಕ್ಕಳದ್ದಾಗಿದೆ. ಈ ಬಗ್ಗೆ ತಾಲೂಕಿನ ಅಧಿಕಾರಿಗಳು, ಶಾಸಕರು ಗಮನ ಹರಿಸಿ ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿಯು ಮಕ್ಕಳಿಗೆ ಅವಕಾಶ ನೀಡಬೇಕಾಗಿರುವುದು ಅನಿವಾರ್ಯ ಮತ್ತು ಅವಶ್ಯಕವಾಗಿದೆ.
ಕೋಟ್…
ಶಾಲಾ ಮಕ್ಕಳು ಬಸ್ಸ್ ಏರುತ್ತಿರುವಾಗಲೇ ಬಸ್ಸ್ ಚಲಾಯಿಸುತ್ತಾರೆ. ಏನಾದರು ಅನಾಹುತವಾದರೆ ಯಾರು ಹೊಣೆ? ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿ ಶಾಲಾ ಮಕ್ಕಳಿಗೆ ಅವಕಾಶ ಸಿಗಬೇಕು. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು.–· ರಾಮ್ ದೇಸಾಯಿ, ಸ್ಥಳೀಯ ನಿವಾಸಿ
ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳದೇ ಇರುವುದು ತೀರಾ ತಪ್ಪು. ಈ ಬಗ್ಗೆ ಕೂಡಲೇ ಎಚ್ಚರ ವಹಿಸಿ ಜೊಯಿಡಾ- ರಾಮನಗರ ಭಾಗದಲ್ಲಿ ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ.– ಕೆ.ಎಸ್.ರಾಥೋಡ, ದಾಂಡೇಲಿ ಡಿಪೋ ಮೆನೇಜರ್
ಈ ಬಗ್ಗೆ ಕೂಡಲೇ ಗಮನ ಹರಿಸಿ ಶಾಲಾ ಮಕ್ಕಳಿಗೆ ಯಾವುದೇ ಸಮಸ್ಯೆ ಆಗದಂತೆ ಹಾಗೂ ಸಾರಿಗೆ ಸಿಬ್ಬಂದಿಯವರಿಗೆ ಗಮನ ಹರಿಸಿ ವಾಹನ ಚಲಾವಣೆ ಮಾಡುವಂತೆ ಎಚ್ಚರಿಕೆ ನೀಡುತ್ತೇನೆ.– ಸಂಜಯ ಕಾಂಬಳೆ, ತಹಶಿಲ್ದಾರ