ದಾಂಡೇಲಿ: ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವ ಕುಳಗಿ ಪ್ರಕೃತಿ ಶಿಬಿರದಲ್ಲಿ ಪರಿಸರ ಆಸಕ್ತರಿಗೆ ಮಾಹಿತಿ ನೀಡಲು ಇದ್ದ ಸಂವಹನ ಕೇಂದ್ರ (ಇಂಟರ್ಪ್ರಿಟೇಶನ್ ಸೆಂಟರ್) ಸ್ಥಗಿತಗೊಂಡು ಹಲವು ತಿಂಗಳು ಕಳೆದಿದ್ದು,ಅಲ್ಲಿದ್ದ ಪರಿಕರಗಳು ಪ್ರಕೃತಿಯ ಮಡಿಲಲ್ಲಿ ಬಿದ್ದಿವೆ.
ದಾಂಡೇಲಿಯಿಂದ 12 ಕಿ. ಮೀ. ದೂರದಲ್ಲಿರುವ ಕುಳಗಿ ಪ್ರಕೃತಿ ಶಿಬಿರಕ್ಕೆ ಅಧ್ಯಯನ ನಿಮಿತ್ತ ಬರುವವರ ಸಂಖ್ಯೆ ಹೆಚ್ಚಿದೆ.ಜತೆಗೆ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಈ ಮೊದಲು ಇಲ್ಲಿ ಕಾಳಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಸಸ್ಯಸಂಕುಲ, ಜೀವ ಸಂಕುಲದ ಮಾಹಿತಿ ನೀಡುವ ಸಂವಹನ ಕೇಂದ್ರವಿತ್ತು. ಅವುಗಳ ಮಾಹಿತಿಗಳನ್ನು ಒಳಗೊಂಡ ಭಿತ್ತಿಪತ್ರ, ಫಲಕ, ಸ್ತಬ್ದಚಿತ್ರ ಸೇರಿದಂತೆ ವಿವಿಧ ಸಲಕರಣೆಗಳು ಅಲ್ಲಿದ್ದವು.
ಈಗ ಕೇಂದ್ರದ ಕಟ್ಟಡ ಮಾತ್ರ ಉಳಿದುಕೊಂಡಿದೆ. ಅಲ್ಲಿ ಜಂಗಲ್ ಸಫಾರಿಯ ಕೌಂಟರ್, ಅರಣ್ಯ ಇಲಾಖೆಯ ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ. ಮಾಹಿತಿಗಳಿದ್ದ ಫಲಕ, ಪೋಸ್ಟರ್ ಗಳನ್ನು ಅಕ್ಕಪಕ್ಕದ ಜಾಗದಲ್ಲಿ ಎಸೆಯಲಾಗಿದೆ. ಇದು ಪರಿಸರ ಆಸಕ್ತರಲ್ಲಿ ಅಸಮಾಧಾನ ಮೂಡಿಸಿದೆ. ‘ಸಂವಹನ ಕೇಂದ್ರದ ಮೂಲಕ ಹೊರಗಿನಿಂದ ಬಂದ ಜನರಿಗೆ ವನ್ಯಸಂಪತ್ತಿನ ಕುರಿತು ಸಮಗ್ರ ಮಾಹಿತಿ ಪಡೆಯಲು ಅನುಕೂಲವಾಗಿತ್ತು. ಜ್ಞಾನ ವೃದ್ಧಿಸುವ ಇಂತಹ ಸೌಲಭ್ಯವನ್ನು ಕೈಬಿಟ್ಟು ಕೇವಲ ಆದಾಯ ಸಂಗ್ರಹಣೆಗೆ ಟಿಕೆಟ್ ಕೌಂಟರ್, ಮಳಿಗೆ ತೆರೆದಿರುವುದು ಸರಿಯಲ್ಲ ಎನ್ನುವುದು ಪರಿಸರ ಪ್ರೇಮಿಗಳ ಅಭಿಪ್ರಾಯ. ‘ಶಿಬಿರ ವ್ಯಾಪ್ತಿಯ ಕಟ್ಟಡಗಳಲ್ಲಿ ಟೇಬಲ್ ಟೆನ್ನಿಸ್ ಸೇರಿದಂತೆ ಮನೋರಂಜನೆಗೆ ಅಧಿಕಾರಿಗಳು ಸೌಲಭ್ಯ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಶಿಬಿರದ ಮೂಲ ಉದ್ದೇಶವನ್ನೇ ಬದಿಗೊತ್ತಲಾಗಿದೆ’ ಎಂದು ಆರೋಪಿಸಿದರು. ‘ಹಲವು ವರ್ಷಗಳ ಹಿಂದೆಯೇ ಸ್ಥಾಪನೆಯಾಗಿದ್ದ ಸಂವಹನ ಕೇಂದ್ರದಲ್ಲಿ ಪರಿಣಾಮಕಾರಿ ಬದಲಾವಣೆ ತರಬೇಕಿದೆ, ಅದಕ್ಕಾಗಿ ಈಗಿದ್ದ ಕೇಂದ್ರ ನಿಲ್ಲಿಸಲಾಗಿದೆ.ಅತ್ಯಾಧುನಿಕ ತಂತ್ರಜ್ಞಾನ ಆಧರಿಸಿ ಮಾಹಿತಿ ನೀಡುವ ಕೇಂದ್ರ ಸ್ಥಾಪನೆಗೂ ಚಿಂತನೆ ನಡೆದಿದೆ. ಮೋಜಿಗಾಗಿ ಶಿಬಿರ ಬಳಕೆಯಾಗಿಲ್ಲ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.