ಶಿರಸಿ: ಯುವಜನ ಸೇವಾ ಇಲಾಖೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕ್ರೀಡಾಂಗಣದಲ್ಲಿನ ವ್ಯಾಯಾಮ ಶಾಲೆ ಮೂಲಭೂತ ಸೌಕರ್ಯ, ವಿನೂತನ ಮತ್ತು ವೈಜ್ಞಾನಿಕ ಸಲಕರಣೆ ಕೊರತೆ ಎದುರಿಸುತ್ತಿದ್ದು ಶೀಘ್ರದಲ್ಲಿ ಸುಸಜ್ಜಿತ ವ್ಯಾಯಾಮ ಶಾಲೆಯಾಗಿ ಪುನರ್ಚೇತನಗೊಳಿಸಬೇಕೆಂದು ಸ್ಫಂದನಾ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಜಿಲ್ಲಾಧಿಕಾರಿಗೆ ಅಗ್ರಹಿಸಿದ್ದಾರೆ.
ಕಳೆದ 2 ದಶಕದ ಹಿಂದೆ ಸ್ಥಳೀಯ ಉಪವಿಭಾಗಾಧಿಕಾರಿಯಾಗಿದ್ದ ನವೀನ್ ರಾಜ್ ಸಿಂಗ್ ಅವರ ಮುತುವರ್ಜಿ ಹಾಗೂ ವಿಶೇಷ ಆಸಕ್ತಿಯಿಂದ ಯುವಜನ ಮತ್ತು ಕ್ರೀಡಾಇಲಾಖೆ ನಿರ್ವಹಣೆದೊಂದಿಗೆ ಜಿಲ್ಲಾ ಮಾರಿಕಾಂಬಾ ಕ್ರೀಡಾಂಗಣ ಆವರಣದಲ್ಲಿ ಕ್ರೀಡಾಪಟು ಹಾಗೂ ಯುವಕರಿಗೆ ಪೂರಕವಾಗಿ ಪ್ರಾರಂಭಿಸಲಾದ ವ್ಯಾಯಾಮ ಶಾಲೆ ಪ್ರಾರಂಭವಾಗಿ 2 ದಶಕಗಳಾದವು. ಆದರೆ ಸರಕಾರದ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕಾಣದೇ ಯುವಕರನ್ನು ಆಕರ್ಷಿಸಲು ವಿಫಲವಾಗಿರುವುದು ವಿಷಾದಕರ ಎಂದು ಅವರು ಹೇಳಿದರು. ಖಾಸಗಿ ಜಿಮ್ನ ಪೈಪೋಟಿ ಮತ್ತು ಆಧುನಿಕರಣದ ಹಿನ್ನೆಲೆಯಲ್ಲಿ ಮಾರಿಕಾಂಬಾ ಕ್ರೀಡಾಂಗಣದಲ್ಲಿನ ಜಿಮ್ ನ ವಿಷಯ ಸಾರ್ವಜನಕವಾಗಿ ಚರ್ಚೆಗೆ ಕಾರಣವಾಗಿದೆ.
ಸೌಕರ್ಯ ವಂಚಿತ :ಹತ್ತು- ಹದಿನೈದು ವರ್ಷದ ಹಳೆಯ ಯಂತ್ರೋಪಕರಣ ಮತ್ತು ಸಲಕರಣೆ, ಸಂಕೀರ್ಣವಾದ ಕಟ್ಟಡ, ಸ್ಥಳಾವಕಾಶ, ಆಧುನಿಕ ಮತ್ತು ಹೊಸ ತಂತ್ರಜ್ಞಾನದ ಸಲಕರಣೆಗಳ ಕೊರತೆ, ಮೂಲಭೂತ ಸೌಕರ್ಯ, ಮೂತ್ರಖಾನೆ, ನೀರಿನ ವ್ಯವಸ್ಥೆ ಇಲ್ಲದೇ ದಿನದಿಂದ ದಿನಕ್ಕೆ ವ್ಯಾಯಾಮ ಶಾಲೆಯ ಆಕರ್ಷಣೆ ಮತ್ತು ಯುವಕರ ಉಪಯೋಗಿಸುವಿಕೆ ಕಡಿಮೆಯಾಗುತ್ತಿದ್ದು ಜಿಲ್ಲಾಡಳಿತ ವ್ಯಾಯಾಮ ಶಾಲೆಯ ಅಭಿವೃದ್ಧಿಗೆ ಕಾರ್ಯ ಪ್ರವೃತ್ತರಾಗಬೇಕು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.