ಕಾರವಾರ: ನಗರದ ಹಿಂದೂ ಹೈಸ್ಕೂಲ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತರಕನ್ನಡ ಜಿಲ್ಲಾ ಹಾಗೂ ಕಾರವಾರ ತಾಲ್ಲೂಕು ಘಟಕದಿಂದ ಶುಕ್ರವಾರ ಆಯೋಜಿಸಿದ್ದ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸಿದ್ದರು.
ತಮ್ಮ ಅಧ್ಯಕ್ಷೀಯ ಮಾತಿನಲ್ಲಿ, ವಿದ್ಯಾರ್ಥಿಗಳು ಅದೆಷ್ಟೇ ಎತ್ತರಕ್ಕೆ ಹೋದರು ಹೆತ್ತವರನ್ನು ಮರೆಯಬಾರದು. ಜೊತೆಗೆ ಬದುಕಲು ಕಲಿಸಿಕೊಟ್ಟಂತಹ ಮತ್ತು ಮಣ್ಣಿನ ಮುದ್ದೆಯಂತಿದ್ದವರಿಗೆ ಶಿಲ್ಪದ ರೂಪ ನೀಡಿದ ಗುರುಗಳನ್ನು ಸ್ಮರಿಸುವುದು ಪ್ರತಿಯೋರ್ವ ವಿದ್ಯಾರ್ಥಿಯ ಕರ್ತವ್ಯ ಎಂದು ಹೇಳಿದರು.
ಜಿಲ್ಲೆಯ 12 ತಾಲ್ಲೂಕುಗಳಲ್ಲಿ 1108 ಕನ್ನಡಕ್ಕೆ ಶೇ 100ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗಿದೆ. ಸರ್ಕಾರದಿಂದ ಯಾವುದೇ ಅನುದಾನ ಇಲ್ಲದೆ ಇದ್ದರೂ ಕೂಡ ಕನ್ನಡ ಮನಸ್ಸುಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ. ಈ ಮೂಲಕ ಪ್ರತಿಯೋರ್ವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಣ್ಣ ಅಭಿನಂದನೆ ಮೂಲಕ ಕನ್ನಡ ಬೀಜವನ್ನು ಬಿತ್ತಲಾಗುತ್ತಿದೆ. ಇದನ್ನು ಹೆಮ್ಮರವಾಗಿಸಿ ಇನ್ನಷ್ಟು ಸಾಧನೆ ಮಾಡುವ ಕಾರ್ಯವನ್ನು ಪ್ರತಿಯೋರ್ವ ವಿದ್ಯಾರ್ಥಿಗಳು ಮಾಡಬೇಕು ಎಂದರು.
ಉಪ ಯೋಜನಾ ಸಮನ್ವಯಾಧಿಕಾರಿ ಶ್ರೀಕಾಂತ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಈ ಹಿಂದೆ ಭಾಷಾ ವಿಷಯ ಬಿಟ್ಟು ಬೇರೆ ವಿಷಯದಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದು ಸಾಧನೆ ಮಾಡುತ್ತಿದ್ದರು. ಆದರೆ ಇದೀಗ ಭಾಷಾ ವಿಷಯದಲ್ಲಿಯೂ ಪೂರ್ಣ ಅಂಕ ಪಡೆಯುವಷ್ಟು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಕೊರೋನಾ ಸಮಯದಲ್ಲಿಯೂ ಓದಿ ಸಾಧನೆ ಮಾಡಿದ ಈ ಕಾರ್ಯ ಇತರರಿಗೆ ಪ್ರೇರಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರವಾರ ತಾಲ್ಲೂಕಿನಲ್ಲಿ ಕನ್ನಡ ಭಾಷೆಯಲ್ಲಿ ಶೇ 100 ಅಂಕ ಪಡೆದ 108 ವಿದ್ಯಾರ್ಥಿಗಳನ್ನು ಹಾಗೂ ಕನ್ನಡ ಭಾಷಾ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ಜಾರ್ಜ್ ಫರ್ನಾಂಡೀಸ್, ಹಿಂದೂ ಹೈಸ್ಕೂಲ್ ಮುಖ್ಯ ಶಿಕ್ಷಕ ಅರುಣ್ ರಾಣೆ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಇಬ್ರಾಹಿಂ ಕಲ್ಲೂರು, ಗಣಪತಿ ಮಾಂಗ್ರೆ, ದೇವಿದಾಸ್ ನಾಯ್ಕ, ಡಾ.ಶಿವಾನಂದ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು
ಕೋಟ್…
ಇಂಗ್ಲೀಷ್ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಓದಿದದರು ಕೂಡ ಒಳ್ಳೆಯ ಮನಸ್ಸಿದ್ದಲ್ಲಿ ಕನ್ನಡದಲ್ಲಿ ಸಾಧನೆ ಮಾಡಲು ಯಾವುದೇ ಅಡ್ಡಿಯಾಗುವುದಿಲ್ಲ. ಪಠ್ಯಗಳ ಜೊತೆಗೆ ಪಠ್ಯೇತರ ವಿಷಯಗಳನ್ನು ಮತ್ತು ದಿನಪತ್ರಿಕೆ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು.– ಬಿ.ಎನ್.ವಾಸರೆ, ಕಸಾಪ ಜಿಲ್ಲಾಧ್ಯಕ್ಷ