ಹೊನ್ನಾವರ: ತಾಲೂಕಿನ ಹಳದಿಪುರ ಚಿಪ್ಪಿಹಕ್ಕಲ ಕ್ರಾಸ್ ಸಮೀಪದ ಗೀತಾ ಕೋಲ್ಡ್ರಿಂಕ್ಸ್ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು ನಗದು, ಬೆಳ್ಳಿಯ ದೇವರ ಮೂರ್ತಿ ಕದ್ದೊಯ್ದ ಘಟನೆ ನಡೆದಿದೆ.
ಹಳದಿಪುರದ ಬಾಬು ಭಂಡಾರಿ ಎನ್ನುವವರಿಗೆ ಸೇರಿದ ಅಂಗಡಿಯಲ್ಲಿ ಕಳ್ಳತನವಾಗಿದೆ. ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಬಂದು, ಅಂಗಡಿಯ ಚಿಲಕ ಮುರಿದು ಒಳಹೊಕ್ಕಿದ್ದಾನೆ. ಮೊದಲು ಅಂಗಡಿಯೊಳಗೆ ಅಳವಡಿಸಿದ ಸಿಸಿ ಟಿವಿ ಕ್ಯಾಮೆರಾ ತಿರುಗಿಸಿದ್ದು, ನಂತರ ತನ್ನ ಕೃತ್ಯವೆಸಗಲು ಮುಂದಾಗಿದ್ದಾನೆ. ಅಂಗಡಿ ಮಾಲೀಕರು ತಮ್ಮ ವ್ಯಾಪಾರ- ವಹಿವಾಟಿಗಾಗಿ ಇಟ್ಟ ನಗದು ಹಣವಿರುವ ಡಬ್ಬವನ್ನೆ ಕದ್ದಿದ್ದುಅದರಲ್ಲಿದ್ದ ಅಂದಾಜು 35,000 ನಗದು, ಬೆಳ್ಳಿಯ ಎರಡು ಇಂಚಿನ ಆಂಜನೇಯ ಮೂರ್ತಿ ಕದ್ದೊಯ್ದು ಹಣ ಹಾಗೂ ಬೆಳ್ಳಿಮೂರ್ತಿ ತೆಗೆದು ಡಬ್ಬವನ್ನು ಅಂಗಡಿಯ ಹೊರಗಿನ ಚರಂಡಿಯಲ್ಲಿ ಬಿಸಾಡಿದ್ದಾನೆ.
ಸಿಸಿ ಟಿವಿ ಕ್ಯಾಮೆರಾದ ದೃಶ್ಯ ಸಿಕ್ಕಿ ಪತ್ತೆಯಾಗಬಹುದೆಂದು ಕ್ಯಾಮೆರಾದ ಡಿವಿಆರ್ನಲ್ಲಿದ್ದ ಸಲಕರಣೆಗಳನ್ನು ಕಿತ್ತು ಅಂಗಡಿ ಸನಿಹದ ಚರಂಡಿಗೆಸೆದಿದ್ದಾನೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.