ಶಿರಸಿ:ಹವಾಮಾನ ವೈಪರೀತ್ಯವನ್ನು ಸಹಿಸಿಕೊಂಡು ಬೆಳೆಯುವ ತರಕಾರಿಗಳನ್ನು ಬೆಳೆಯುವ ನಿಟ್ಟಿನಲ್ಲಿ ರೈತರು ಗಮನವಹಿಸಬೇಕು ಎಂದು ಖ್ಯಾತ ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.
ಅವರು ನಗರದ ಉತ್ತರ ಕನ್ನಡ ಸಾವಯವ ಒಕ್ಕೂಟದಲ್ಲಿ ವನಸ್ತ್ರೀ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ತರಕಾರಿ ಬೀಜದ ಮೇಳವನ್ನು ಉದ್ಘಾಟಿಸಿ ಮಾತನಾಡಿ, ತರಕಾರಿಗೆ ಅತಿದೊಡ್ಡ ಶಕ್ತಿಯಿದೆ. ರೈತರಿಗೆ ಆರ್ಥಿಕವಾಗಿ ಬಹುಬೇಗ ಪರಿಣಾಮವನ್ನು ನೀಡುತ್ತದೆ. ಕೆಲಸದಲ್ಲಿನ ಸೂಕ್ಷ್ಮತೆಯು ಬೆಳೆಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇತ್ತಿಚಿನ ದಿನದಲ್ಲಿನ ಅಡುಗೆಮನೆಗಳು ಸ್ಟಾರ್ ಹೊಟೆಲ್ ಗಳಾಗಿವೆ. ಮನೆಯಲ್ಲಿ ಹೊಗೆಯ ಲವಲೇಶವೂ ಸೋಕುತ್ತಿಲ್ಲ. ಕೃಷಿಯಲ್ಲಿನ ಅನುಭವದ ಜ್ಞಾನ ಹಂಚಿಕೆಯಾಗಲು ಇಂತಹ ತರಕಾರಿ ಬೀಜದ ಮೇಳಗಳು ಅವಶ್ಯಕ ಎಂದರು.
ಗಿಡದ ಜೊತೆ ಬದುಕುವ ಖುಷಿಗೆ ಸರಿಸಾಟಿಯಿಲ್ಲ. ಪೇಟೆಯಲ್ಲಿನ ತರಕಾರಿ ಜೊತೆಗೆ ಪ್ಲಾಸ್ಟಿಕ್ ಬ್ಯಾಗನ್ನೂ ಮನೆಗೆ ತರುವ ಪದ್ಧತಿ ರೂಢಿಯಾಗಿದೆ. ತರಕಾರಿ ಬೀಜದ ಹಂಚಿಕೆಯ ಹವ್ಯಾಸವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಿದೆ. ಮನೆಯ ಹಿತ್ತಲು ಚೆನ್ನಾಗಿದ್ದಲ್ಲಿ ಅಡುಗೆ ಮನೆ ಚೆನ್ನಾಗಿರುತ್ತದೆ ಎಂದರು.
ಪ್ರಸ್ತಾವಿಕ ಮಾತುಗಳನ್ನಾಡಿದ ಉತ್ತರ ಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಕೋಟೆಮನೆ ಮಾತನಾಡಿ, ಒಕ್ಕೂಟವು ಕಳೆದ ಐದು ವರ್ಷಗಳಿಂದ ಸ್ಥಳೀಯ ಉತ್ಪನ್ನಗಳ ಮೌಲ್ಯವರ್ಧನೆಯನ್ನು ಮಾಡಿ, ಹೊರಗಡೆ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷದಲ್ಲಿ 5 ಕೋಟಿಗೂ ಅಧಿಕ ಉತ್ಪನ್ನವನ್ನು ಮಾರಾಟ ಮಾಡಲಾಗಿದೆ. ಪ್ರಸ್ತುತ ರೈತರ ಅಗತ್ಯತೆ ಮನಗಂಡು ತರಕಾರಿ ಬೀಜದ ಮೇಳ ಆಯೋಜಿಸಲಾಗಿದೆ. ಮುಂಬರುವ ಸಪ್ಟೆಂಬರ್ ತಿಂಗಳಿಂದ ಉತ್ತರ ಕನ್ನಡ ಸಾವಯವ ಒಕ್ಕೂಟದಿಂದ ಪ್ರತಿ ವಾರ ಸಾವಯವ ಸಂತೆಯನ್ನು ಆರಂಭಿಸಲಾಗುವುದು ಎಂದರು.
ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ್ ಮಾತನಾಡಿ, ಈ ತರಕಾರಿ ಬೀಜದ ಮೇಳವು ಸಮಯೋಚಿತ ಕಾರ್ಯಕ್ರಮವಾಗಿದೆ. ಇಲಾಖೆಯಿಂದಲೂ ಸಹ ಸಾವಯವ ಕೃಷಿಗೆ ಆದ್ಯತೆ ನೀಡುತ್ತಿದ್ದೇವೆ. ಸ್ಥಳೀಯ ತರಕಾರಿ ಬೆಳೆಗಾರರು ಹೆಚ್ಚಬೇಕು ಎಂದರು.
ತರಕಾರಿ ಬೀಜ ಮೇಳ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ವನಸ್ತ್ರೀ ಸಂಸ್ಥೆ ಸದಸ್ಯರಿಂದ ವಿವಿಧ ರೀತಿಯ, ಅಪರೂಪದ ಉತ್ಕೃಷ್ಟ ಗುಣಮಟ್ಟದ ತರಕಾರಿ ಬೀಜ ಮಾರಾಟದ ವ್ಯವಸ್ಥೆ ಹಮ್ಮಿಕೊಳ್ಳಲಾಗಿತ್ತು. ತರಕಾರಿ ಬೀಜದ ಮೇಳವು ಶನಿವಾರದ ವರೆಗೆ ನಡೆಯಲಿದ್ದು, ಆಸಕ್ತರು ಆಗಮಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಗುರುಪಾದ ಹೆಗಡೆ, ರಾಮಚಂದ್ರ ಹೆಗ್ನೂರು, ವನಸ್ತ್ರೀ ಸಂಸ್ಥೆಯ ವಿನೋದಾ ಅತ್ತಿಸರ ಇದ್ದರು. ಒಕ್ಕೂಟದ ನಿರ್ದೇಶಕ ರಾಘವ ಹೆಗಡೆ ಕೊರ್ಸೆ ಸ್ವಾಗತಿಸಿದರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎನ್. ವಿಕಾಸ ನಿರೂಪಿಸಿದರು.