ಮುಂಡಗೋಡ: ಸರಕಾರದ ಆದೇಶವನ್ನು ಧಿಕ್ಕರಿಸಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರಿಯೆ ಅರಣ್ಯ ಇಲಾಖೆ ಜರುಗಿಸುತ್ತಿರುವುದು ಖಂಡನಾರ್ಹ. ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಆದೇಶದ ಕಾನೂನು ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಹೋರಾಟಗಾರರ ವೇದಿಕೆಯ ಉಪಸ್ಥಿತಿಯಲ್ಲಿ ವಿಧಾನ ಸೌಧದ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್, ಅರಣ್ಯ ಸಚಿವ ಉಮೇಶ ಕತ್ತಿ, ರಾಜ್ಯದ ಹಿರಿಯ ಅರಣ್ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಫೆ.22 ರಂದು ಬೆಂಗಳೂರಿನಲ್ಲಿ ಜರುಗಿದ ಸಭೆಯಲ್ಲಿ ತೀರ್ಮಾನಕ್ಕೆ ವ್ಯತಿರಿಕ್ತವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಹಾಜರಾಗುವಂತೆ ಅರಣ್ಯ ಅತಿಕ್ರಮಣದಾರರಿಗೆ ನೀಡಿದ ನೋಟಿಸಿಗೆ ಅವರು ಪ್ರತಿಕ್ರಿಯಿಸಿದರು.
ಅರಣ್ಯ ಇಲಾಖೆಯು ಪ್ರಸಕ್ತ ವರ್ಷ ಜನವರಿ, 6ರಂದು ಅರಣ್ಯ ಪ್ರದೇಶಗಳ ಒತ್ತುವರಿ ವಿಚಾರಣೆ ನಡೆಸಲು ತುರ್ತು ಕ್ರಮ ಜರುಗಿಸಬೇಕೆಂಬ ನಿರ್ದೇಶನಕ್ಕೆ ಸಭೆಯು ಹಿಂಪಡೆಯುವಂತೆ ಹಾಗೂ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿನ ಅರ್ಜಿ ಇತ್ಯರ್ಥವಾಗುವವರೆಗೂ ಅರ್ಜಿದಾರರಿಗೆ ನೋಟಿಸ್ ನೀಡುವುದಾಗಲಿ, ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸುವುದಾಗಲಿ ಮಾಡಬಾರದೆಂದು ತೀರ್ಮಾನಿಸಿ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಆದರೆ ಜಿಲ್ಲಾದ್ಯಂತ ಒಕ್ಕಲೆಬ್ಬಿಸುವ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅರಣ್ಯವಾಸಿಗಳಿಗೆ ಕರ್ನಾಟಕ ಅರಣ್ಯ ಕಾಯಿದೆ ಮತ್ತು ಅರಣ್ಯ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಮಾಡಿ ಕಾನೂನು ಬಾಹಿರವಾಗಿ ಅತಿಕ್ರಮಣ ಮಾಡಿರುವುದರಿಂದ ಲಭ್ಯವುಳ್ಳ ದಾಖಲೆಗಳನ್ನ ಮತ್ತು ಸಾಕ್ಷ್ಯದೊಂದಿಗೆ ನಿರ್ದಿಷ್ಟ ಪಡಿಸಿದ ಒಕ್ಕಲೆಬ್ಬಿಸುವ ಪ್ರಾಧಿಕಾರದ ವಿಚಾರಣೆಗೆ ಹಾಜರುಪಡಿಸಲು, ಸೂಕ್ತ ಸಮಯಾವಕಾಶ ನೀಡದೇ ನೋಟಿಸ್ ನೀಡುತ್ತಿರುವುದು ಸರಕಾರದ ಆದೇಶ ಉಲ್ಲಂಘನೆಗೆ ಸ್ಪಷ್ಟ ನಿರ್ದೇಶನವಾಗಿದೆ ಎಂದು ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರಕಾರದ ಆದೇಶ ‘ಡೊಂಟ್ ಕೇರ್’ : ಅತಿಕ್ರಮಣದಾರರಿಗೆ ನೋಟೀಸ್ ಜಾರಿ ಮಾಡಿ, ಕಾನೂನು ಮತ್ತು ಸರಕಾರದ ಆದೇಶ ‘ಡೊಂಟ್ ಕೇರ್’ ಮಾಡಿರುವ ಅರಣ್ಯ ಅಧಿಕಾರಿಗಳ ಪ್ರವೃತ್ತಿ ಖಂಡನಾರ್ಹ. ಸರಕಾರದ ಆದೇಶವನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರವೀಂದ್ರ ನಾಯ್ಕ ಉಸ್ತುವಾರಿ ಸಚಿವರಿಗೆ ಆಗ್ರಹಿಸಿದ್ದಾರೆ.