ಸಿದ್ದಾಪುರ: ಪಟ್ಟಣದ ಬಾಲಭವನದಲ್ಲಿ ಶಿಕ್ಷಕರ ವೇದಿಕೆ ಆಯೋಜಿಸಿದ್ದ ಮೂವರು ಶಿಕ್ಷಕರ ಅಭಿನಂದನಾ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿರುವದರ ಜೊತೆಗೆ ಜವಾಬ್ದಾರಿಯುತವಾದದ್ದು.ವಿದ್ಯಾರ್ಥಿಗಳನ್ನು ಪ್ರತಿಭಾವಂತರಾಗಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಪ್ರತಿಯೊಬ್ಬರಿಗೂ ಅತ್ಯಗತ್ಯವಾದ ಶಿಕ್ಷಣವನ್ನು ನೀಡುವಲ್ಲಿ ಇನ್ನಷ್ಟು ಶ್ರಮವಹಿಸಬೇಕಿದೆ ಎಂದು ಹೇಳಿದರು.
ಈ ತಾಲೂಕಿನ ಶೈಕ್ಷಣಿಕ ಪ್ರಗತಿ ಅತ್ಯುತ್ತಮವಾಗಿರಲು ಇಲ್ಲಿನ ಶಿಕ್ಷಕರ ಪರಿಶ್ರಮ ಕಾರಣ. ಶಿಕ್ಷಕರಾದವರು ಪ್ರತಿದಿನವೂ ನಾವೀನ್ಯತೆಯನ್ನು ಪಡೆದುಕೊಳ್ಳುತ್ತ ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಸಾರ್ಥಕತೆ ದೊರಕುತ್ತದೆ. ಇಲ್ಲಿ ಅಭಿನಂದಿಸಲ್ಪಟ್ಟ ಮೂವರು ಶಿಕ್ಷಕರು ತಮ್ಮ ವೃತ್ತಿಯಲ್ಲಿ ಸಮರ್ಪಕ ಸೇವೆಯನ್ನು ನೀಡುವದರ ಜೊತೆಗೆ ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಳದಕಟ್ಟಾ ಸರಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಜಿ.ಆಯ್.ನಾಯ್ಕ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವದರ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುವಲ್ಲಿ ಗಮನ ಹರಿಸಬೇಕು. ಶಿಕ್ಷಕರ ವೇದಿಕೆಯ ಜನಪರ ಕಾರ್ಯಗಳು ಇನ್ನಷ್ಟು ಹೆಚ್ಚಲಿ ಎಂದರು.
ಈ ಸಂದರ್ಭದಲ್ಲಿ ಸೇವಾ ನಿವೃತ ಶಿಕ್ಷಕ ಪಿ.ಜಿ.ನಾಯ್ಕ, ವರ್ಗಾವಣೆಗೊಂಡು ತೆರಳುತ್ತಿರುವ ಶಿಕ್ಷಕ ಆರ್.ಬಿ.ರಾಠೋಡ್ ಹಾಗೂ ತಾಲೂಕು ಕಸಾಪ ಅಧ್ಯಕ್ಷರಾಗಿ ಆಯ್ಕೆಗೊಂಡ ಶಿಕ್ಷಕ ಗೋಪಾಲ ನಾಯ್ಕ ಬಾಶಿ ಅವರನ್ನು ಶಿಕ್ಷಕರ ವೇದಿಕೆಯ ವತಿಯಿಂದ ಅಭಿನಂದಿಸಲಾಯಿತು. ತಾಲೂಕು ಸೇವಾದಳದ ಅಧ್ಯಕ್ಷ ನಾಗರಾಜ ಭಟ್ಟ ಕೆಕ್ಕಾರ, ತಾಲೂಕ ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಶಿಕ್ಷಕಿ, ಕವಯಿತ್ರಿ ಶೋಭಾ ನಾಯ್ಕ ಹಿರೆಕೈ ಮಾತನಾಡಿದರು.
ಅಭಿನಂದನೆ ಸ್ವೀಕರಿಸಿದ ಪಿ.ಆರ್.ನಾಯ್ಕ, ಆರ್.ಬಿ.ರಾಠೋಡ್, ಗೋಪಾಲ ನಾಯ್ಕ ಕೃತಜ್ಞತೆ ವ್ಯಕ್ತಪಡಿಸಿದರು. ಶಿಕ್ಷಕರಾದ ಎಂ.ಎಂ.ಅಂಬಿಗ, ಪ್ರಭಾಕರ ಮೌರ್ಯ, ರೀಟಾ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕರ ವೇದಿಕೆ ಪ್ರಮುಖ ಎಂ.ಕೆ. ನಾಯ್ಕ ಕಡಕೇರಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸುಧಾರಾಣಿ ನಾಯ್ಕ ನಿರೂಪಿಸಿದರು.