ದಾಂಡೇಲಿ: ಜನರಿಗೆ ಶುದ್ಧ ಕುಡಿಯುವ ನೀರು ಪೊರೈಕೆಯಾಗಬೇಕೆಂಬ ಉದ್ದೇಶದಿಂದ ಕಳೆದ ನಾಲ್ಕೈದು ವರ್ಷಗಳ ಹಿಂದೆ ಅಂದು ಸಚಿವರಾಗಿದ್ದ ಈಗಿನ ಶಾಸಕ ಆರ್.ವಿ.ದೇಶಪಾಂಡೆಯವರ ವಿಶೇಷ ಮುತುವರ್ಜಿಯಿಂದ ಹಳೆದಾಂಡೇಲಿಯಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕ ನಿರ್ವಹಣೆಯಿಲ್ಲದೇ ಕಳೆದೆರಡುವರೆ ತಿಂಗಳಿನಿಂದ ಸ್ಥಗಿತಗೊಂಡಿದೆ.
ಹಳೆದಾಂಡೇಲಿ, ಬೈಲುಪಾರಿನ ನಾಗರಿಕರಿಗೆ ಈ ಘಟಕದಿಂದ ಬಹಳಷ್ಟು ಅನುಕೂಲವಾಗುತ್ತಿತ್ತು. ಆದರೆ ಇದೀಗ ನಿತ್ಯ ನೀರು ಕೊಂಡೊಯ್ಯುವವರಿಗೆ ಸಮಸ್ಯೆಯಾಗತೊಡಗಿದೆ. ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗದಲ್ಲಿ ಅಳವಡಿಸಲಾದ ಗಾಜು ಮುರಿದು ಹೋಗಿದೆ. ಇನ್ನು ನೀರು ಸಂಗ್ರಹಿಸಲಾಗುವ ನೀರಿನ ಡ್ರಂನಲ್ಲಿ ನೀರು ತುಂಬಿ ಕೆಳಗೆ ಚೆಲ್ಲಿ ಘಟಕದೊಳಗಡೆ ಹರಡಿಕೊಂಡಿದೆ.
ಶುದ್ಧ ಕುಡಿಯುವ ನೀರು ಕೊಡುವ ಘಟಕದೊಳಗಡೆ ಅಶುದ್ಧವಾದ ವಾತವರಣವಿದೆ. ಈ ಬಗ್ಗೆ ಸ್ಥಳೀಯರು ನಗರ ಸಭೆಯ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಂಬಂಧಪಟ್ಟ ಅಧಿಕಾರಿಗಳ ಆಗಮನವಾಗಿಲ್ಲ ಎಂಬ ಆರೋಪ ಕೇಳಿ ಬರತೊಡಗಿದೆ. ಒಂದು ಒಳ್ಳೆಯ ಉದ್ದೇಶಕ್ಕೆ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕ ನಿರ್ವಹಣೆಯಿಲ್ಲದೇ ಸ್ಥಗಿತಗೊಂಡಿರುವುದು ನಗರಸಭೆಯ ದಿವ್ಯ ನಿರ್ಲಕ್ಷ್ಯಕ್ಕೆ ಉತ್ತಮ ಉದಾಹರಣೆ ಎನ್ನಬಹುದು. ಇದರ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ನಗರಸಭೆಯನ್ನು ಸ್ಥಳೀಯರು ಆಗ್ರಹಿಸಿದ್ದಾರೆ.
ಕೋಟ್…
ಶುದ್ಧ ಕುಡಿಯುವ ನೀರಿನ ಘಟಕದ ಹಾಳಾಗಿ ಎರಡೂವರೆ ತಿಂಗಳಾಗಿದೆ. ದುರಸ್ತಿ ಮಾಡಿಕೊಡುವಂತೆ ನಗರ ಸಭೆಗೆ ಹೇಳುತ್ತಲೆ ಇದ್ದೇವೆ. ಆದರೆ ಈವರೆಗೆ ಕ್ರಮ ಕೈಗೊಂಡಿಲ್ಲ.– ಜಾನ್ ಡಿಸಿಲ್ವ, ಸ್ಥಳೀಯರು