ಶಿವಮೊಗ್ಗ: ಸಾಗರ ತಾಲೂಕಿನ ಗಿಳಾಲಗುಂಡಿ ಸಮೀಪ ಕೊಲ್ಲಿ ಬಚ್ಚಲು ಹಳ್ಳಕ್ಕೆ ಆಣೆಕಟ್ಟು ಕಟ್ಟಿ ಜಲ ಸಂಗ್ರಹ ಮಾಡಿ ರೈತರಿಗೆ ನೀರಾವರಿ ಕಲ್ಪಿಸುವ (1000 ಎಕರೆ) ಉದ್ದೇಶದ ಕಿರು ನೀರಾವರಿ ಯೋಜನೆ ಸಂಪೂರ್ಣ ವಿಫಲವಾಗಿದೆ. 20 ವರ್ಷಗಳ ಹಿಂದೆ ಕೋಣೇಹೊಸೂರು ಗ್ರಾಮದ ರೈತರು ವೃಕ್ಷ ಲಕ್ಷ ಆಂದೋಲನದ ನೇತೃತ್ವದಲ್ಲಿ 6 ವರ್ಷ ಸತತ ಚಳುವಳಿ ನಡೆಸಿದ್ದರು. ಕೊಲ್ಲಿ ಬಚ್ಚಲು ಯೋಜನೆ ಅವ್ಯವಹಾರಿಕ, ಅರಣ್ಯ ನಾಶಕ್ಕೆ ಕಾರಣ ಆಗಲಿದೆ, ರೈತರ ಗದ್ದೆ, ತೋಟ, ಮುಳುಗಡೆ ಮಾಡಲಿದೆ. ನೀರಾವರಿ ಯೋಜನೆ ತಾಂತ್ರಿಕವಾಗಿ ಸರಿ ಇಲ್ಲ. ಕರಡಿ ಬೆಟ್ಟ, ಹುಲಿಕಾಡು, ಗವಿಸಿದ್ದೇಶ್ವರ ಬೆಟ್ಟ ಉಳಿಸಿ ಎಂದು ಅಹವಾಲು ಸಲ್ಲಿಸಿದ್ದರು. ಕೇಂದ್ರ ಅರಣ್ಯ ಮಂತ್ರಾಲಯದವರು ಭೇಟಿ ನೀಡಿದ್ದರು. ವಿಧಾನ ಸಭೆಯ ಸಾರ್ವಜನಿಕ ದೂರು ಸಮಿತಿಗೆ ದೂರು ನೀಡಲಾಗಿತ್ತು.
ಆದಾಗ್ಯೂ ಯೋಜನೆ 2006 ರಲ್ಲಿ ಜಾರಿ ಆಯಿತು. ಆದರೆ ಕೊಲ್ಲಿ ಬಚ್ಚಲು ಹಳ್ಳದಿಂದ ಆನಂದಪುರ ಸುತ್ತಲ ಹಳ್ಳಗಳ ರೈತರಿಗೆ ನೀರು ಸಿಗಲಿಲ್ಲ. ಕಿರು ನೀರಾವರಿ ಇಲಾಖೆಯ ಕೊಲ್ಲಿ ಬಚ್ಚಲು ಆಣೆಕಟ್ಟು, ಗೇಟ್ಗಳು ಪೈಪಲೈನ್ಗಳು ಹಾಳು ಬಿದ್ದಿವೆ. ಜಲಾಶಯದಲ್ಲಿ ನೀರಿಲ್ಲ. ಏನಾಗಿದೆ ಎಂದು ಕೇಳುವವರೇ ಇಲ್ಲವಾಗಿದೆ. ಭೂಗಳ್ಳರು ಯೋಜನಾ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ.
ಈ ಹಂತದಲ್ಲಿ 2022 ರ ಫೆಬ್ರವರಿಯಲ್ಲಿ ಕೇಂದ್ರ ಅರಣ್ಯ ಮಂತ್ರಾಲಯದ ಅಧಿಕಾರಿ ತಂಡ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಪರಿಸ್ಥಿತಿ ಯೋಜನೆಯ ವಿಫಲತೆ ಬಗ್ಗೆ ವರದಿ ನೀಡಿದೆ. ಈ ಪ್ರದೇಶಕ್ಕೆ ರಕ್ಷಣೆ ಇಲ್ಲ. ರಾಜ್ಯ ಸರ್ಕಾರ ಅರಣ್ಯ ಭೂಮಿ ಹಿಂಪಡೆದು ಸಂರಕ್ಷಣೆ ಮಾಡಬೇಕು ಎಂದು ಆದೇಶ ನೀಡಿದೆ.
ಜಿಲ್ಲಾ ಅರಣ್ಯ ಇಲಾಖೆ, ಕೊಲ್ಲಿ ಬಚ್ಚಲು ಅರಣ್ಯಗಳ ರಕ್ಷಣೆಗೆ ಸರ್ಕಾರಿ ಭೂಮಿ ರಕ್ಷಣೆಗೆ ಮುಂದಾಗಬೇಕು ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸಂಚಾಲಯಕ ಕೆ.ವೆಂಕಟೇಶ್, ಅಶೋಕ ತುಮರಿ, ಪ್ರೋ. ಬಿ.ಎಂ. ಕುಮಾರಸ್ವಾಮಿ, ಶ್ರೀಪಾದ ಬಿಚ್ಚುಗತ್ತಿ. ಎಂ.ಆರ್. ಪಾಟೀಲ, ಮುಂತಾದ ಪರಿಸರ ತಜ್ಞರು, ಹೋರಾಟಗಾರರು ಒತ್ತಾಯ ಮಾಡಿದ್ದಾರೆ. ಈ ಅರಣ್ಯ ಪ್ರದೇಶ ಪಶ್ಚಿಮ ಘಟ್ಟದ ಅಂಚಿನಲ್ಲಿದೆ. ಸೂಕ್ಷ್ಮವಾಗಿದೆ ಎಂಬುದನ್ನು ಅರಣ್ಯ ವಿಜ್ಞಾನಿಗಳು ಎತ್ತಿ ಹೇಳಿದ್ದಾರೆ.
ಕೊಲ್ಲಿ ಬಚ್ಚಲು ಅರಣ್ಯ ಚಳುವಳಿ ಹಿನ್ನೆಲೆ: ಫೆ.16 , 2000 ರಂದು ಆರಂಭವಾದ ಕೊಲ್ಲಿ ಬಚ್ಚಲು ಅರಣ್ಯ ಚಳುವಳಿ 2006 ರ ವರೆಗೆ ನಡೆಯಿತು. ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ಅರಣ್ಯ ಭೂಮಿಯನ್ನು ಕಂದಾಯ ಭೂಮಿ ಎಂದು ಅಕ್ರಮವಾಗಿ ದಾಖಲೆ ತಿದ್ದಲಾಗಿತ್ತು. ಕೇಂದ್ರ ಅರಣ್ಯ ಮಂತ್ರಾಲಯದ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಈ ಎಲ್ಲ ವಿಷಯವನ್ನು ವಿಧಾನ ಸಭೆಯ ದೂರು ಸಮಿತಿ ಮುಂದೆ ಮಂಡಿಸಲಾಗಿತ್ತು. ನೂರಾರು ಎಕರೆ ಅರಣ್ಯ ನಾಶ ಮಾಡದೇ ಆನಂದಪುರ ಸುತ್ತಲ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಬದಲೀ ಯೋಜನೆಯನ್ನು ವೃಕ್ಷ ಲಕ್ಷ ಆಂದೋಲನ ಸೂಚಿಸಿತ್ತು. ಈ ಪ್ರದೇಶದ ಜೀವ ವೈವಿಧ್ಯ ದಾಖಲಾತಿ ವರದಿಯನ್ನು ಡಾ|| ಕೇಶವ ಕೊರ್ಸೆ ನೇತೃತ್ವದಲ್ಲಿ ಗ್ರಾಮ ಅರಣ್ಯ ಸಮಿತಿ ಮೂಲಕ ತಯಾರಿಸಲಾಗಿತ್ತು. ಡಾ|| ದಯಾನಂದ, ಹನಿಯ ರವಿ ಹೊಸನಗರ, ರೈತ ಮುಖಂಡ ಚಂದ್ರಪ್ಪ ರಿಪ್ಪನ್ ಪೇಟೆ, ಮಹಾಬಲಗಿರಿ, ಬಂಗಾರಪ್ಪ ರಾಮಪ್ಪ, ರಾಘವೇಂದ್ರ, ಇನ್ನೂ ಹಲವರು ಅರಣ್ಯ ಮಧ್ಯೆ ಮಾನವ ಸರಪಣಿ ನಿರ್ಮಿಸಿ ಪ್ರತಿಭಟನೆ ಸಲ್ಲಿಸಿದ್ದರು. ಶಿವಮೊಗ್ಗ, ಸಾಗರ, ಶಿರಸಿಯ ಯುವಕರು, ವಿದ್ಯಾರ್ಥಿಗಳು, ಜಾಗೃತಿ ಶಿಬಿರದಲ್ಲಿ ಭಾಗಿಯಾದರು. ಇಂಗ್ಲೀಷ, ಕನ್ನಡ ಪತ್ರಿಕೆಗಳು ವಿಶೇಷ ವರದಿ ಪ್ರಕಟಿಸಿದ್ದವು.
ಆದರೆ 2005-06 ರಲ್ಲಿ ಅಂದಿನ ರಾಜ್ಯ ಸರಕಾರ ಯೋಜನೆ ಜಾರಿ ಮಾಡಿತ್ತು. ಕೊಲ್ಲಿ ಬಚ್ಚಲು ನೀರಾವರಿ ಯೋಜನೆ ವಿಫಲವಾದರೂ ಯಾರೂ ಪ್ರಶ್ನಿಸಲೇ ಇಲ್ಲ. ಈಗ ಕೇಂದ್ರ ಸರ್ಕಾರ ರಾಜ್ಯ ಅರಣ್ಯ ಇಲಾಖೆಗೆ ಚಾಟಿ ಬೀಸಿದೆ. ನೂರಾರು ಎಕರೆ ಭಾಗಶಃ ಅರಣ್ಯ ನಾಶವಾದರೂ ಕೊಲ್ಲಿ ಬಚ್ಚಲು ಅರಣ್ಯ ಪ್ರದೇಶಕ್ಕೆ ರಕ್ಷಣಾ ಕವಚ ನಿರ್ಮಿಸಲು ಸರ್ಕಾರ ಮುಂದಾಗಬೇಕಿದೆ