ಸಿದ್ದಾಪುರ: ತಾಲೂಕಿನ ಮುತ್ಮುರ್ಡಿನ ಖ್ಯಾತ ಛಾಯಾಗ್ರಾಹಕ ನಾಗೇಂದ್ರ ಮುತ್ಮುರ್ಡು ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳೊಂದಿಗೆ ‘ಬೆಸ್ಟ್ ಇಂಡಿಯನ್ ಎಂಟ್ರಂಟ್ ಅವಾರ್ಡ್’ ಶ್ರೇಯಸ್ಸಿಗೆ ಪಾತ್ರರಾಗಿ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ದೆಹಲಿಯಲ್ಲಿ ಅಂತರರಾಷ್ಟ್ರೀಯ ಕಲಾತ್ಮಕ ಛಾಯಾಗ್ರಹಣ ಒಕ್ಕೂಟದಿಂದ ಮಾನ್ಯತೆ ಪಡೆದ ‘ಜೆಸಿಎಂ ಅಂತರರಾಷ್ಟ್ರೀಯ ಫೋಟೋಗ್ರಾಫಿಕ್ ಸಲಾನ್ ಸರ್ಕಿಟ್ ಜೂನ್-2022’ರ ಅಡಿಯಲ್ಲಿ ಐದು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ನಾಗೇಂದ್ರ ಮುತ್ಮುರ್ಡು ಅವರ ಆಶಾಕಿರಣ (ರೇಯ್ಸ ಆಫ್ ಹೋಪ್) ಚಿತ್ರಕ್ಕೆ ವರ್ಣಚಿತ್ರಗಳು ವಿಭಾಗದಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ, ‘ಅಮ್ಮ-ಅವಳಿ-ಅಕ್ಕರೆ’ (ಮದರ್-ಟ್ವಿನ್ಸ್-ಅಫೆಕ್ಶನ್) ಚಿತ್ರಕ್ಕೆ ಕಪ್ಪು ಬಿಳುಪು ವಿಭಾಗದಲ್ಲಿ ಚಿನ್ನದ ಪದಕ, ‘ಆಟದಲ್ಲಿ ಮೈಮರೆತು’ (ಎಕ್ಸಟಾಟಿಕ್ ಇನ್ ಪ್ಲೇಯಿಂಗ್) ಚಿತ್ರಕ್ಕೆ ಕಪ್ಪು ಬಿಳುಪು ವಿಭಾಗದಲ್ಲಿ ಚಿನ್ನ, ‘ಗ್ರಾಮೀಣ ತಾಯಿ’ (ರೂರಲ್ ಮದರ್) ಚಿತ್ರಕ್ಕೆ ಜನರು (ಪೀಪಲ್) ವಿಭಾಗದಲ್ಲಿ ಕಂಚಿನ ಪದಕ ಲಭ್ಯವಾಗಿದೆ. ಇವರ ಇನ್ನುಳಿದ ಆರು ಚಿತ್ರಗಳಿಗೆ ‘ಗೌರವ ರಿಬ್ಬನ್’ ಸೇರಿ ಒಟ್ಟೂ ಹನ್ನೊಂದು ಪ್ರಶಸ್ತಿಗಳು ನಾಗೇಂದ್ರ ಮುತ್ಮುರ್ಡು ಅವರ ಬತ್ತಳಿಕೆಗೆ ಸೇರುವಂತಾಗಿದೆ.
ವಿಶೇಷವೆಂದರೆ ಇವರ 35 ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಸಮಗ್ರ ವೈಯಕ್ತಿಕ ಪ್ರದರ್ಶನ ಪರಿಗಣಿಸಿ ಪ್ರದಾನ ಮಾಡುವ ಪ್ರತಿಷ್ಠಿತ ‘ಅತ್ಯುತ್ತಮ ಭಾರತೀಯ ಸ್ಪರ್ಧಿ’ (ಬೆಸ್ಟ್ ಇಂಡಿಯನ್ ಎಂಟ್ರಂಟ್ ಅವಾರ್ಡ್) ಇವರ ಮುಡಿಗೇರಿದೆ. ಪ್ರಸ್ತುತ ಸ್ಪರ್ಧೆಯಲ್ಲಿ ಪ್ರಪಂಚದ 37 ದೇಶಗಳ 215 ಕಲಾತ್ಮಕ ಛಾಯಾಗ್ರಾಹಕರ 3000 ಚಿತ್ರಗಳು ಪ್ರವೇಶ ಪಡೆದಿದ್ದವು. ನಾಗೇಂದ್ರ ಮುತ್ಮುರ್ಡು ಅವರು ಈಗಾಗಲೇ ಹತ್ತಾರು ದೇಶಗಳು ಏರ್ಪಡಿಸಿದ್ದ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಗಳಿಸುವ ಮೂಲಕ ಛಾಯಾಚಿತ್ರ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗ್ರಾಮೀಣ ಪ್ರತಿಭೆಯಾಗಿದ್ದಾರೆ.