ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಬೇಡ್ತಿ- ವರದಾ ನದಿ ಜೋಡಣೆಯು ಜನಪರ ಯೋಜನೆಯಾಗದೇ, ಸರಕಾರಕ್ಕೆ ಹಣಭಾರ ಯೋಜನೆಯಾಗಿದೆ. ಅವೈಜ್ಞಾನಿಕ, ಜಿಲ್ಲೆಯ ಜನತೆಗೆ ಪ್ರಯೋಜನವಿಲ್ಲದ ಯೋಜನೆಯನ್ನು ಸರಕಾರ ಹಿಂದಕ್ಕೆ ಪಡೆಯಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಸರಕಾರಕ್ಕೆ ಅಗ್ರಹಿಸಿದ್ದಾರೆ.
ರಾಷ್ಟ್ರೀಯ ಭಾವನೆ ಅಡಿಯಲ್ಲಿ ರಾಷ್ಟ್ರ, ರಾಜ್ಯದ ಯೋಜನೆಗಳಿಗೆ ಉತ್ತರ ಕನ್ನಡ ಜಿಲ್ಲೆ ತ್ಯಾಗ ಮಾಡುವುದಾಗಿದೆ ವಿನಃ ಜಿಲ್ಲೆಯ ಅಭಿವೃದ್ಧಿಗೆ ಮತ್ತು ಜನತೆಗೆ ಪೂರಕವಾದ ಯೋಜನೆಗಳು ಬರದೇ ಇರುವುದು ವಿಷಾದಕರ ಎಂದು ಅವರು ಹೇಳಿದರು.
ಎರಡು ಸಾವಿರದ ಎರಡುನೂರು ಕೋಟಿ ರೂಪಾಯಿ ವೇಚ್ಚದ ನದಿ ಜೋಡಣೆಯು ನೈಸರ್ಗಿಕ ವಿರೋಧಿ, ಅವೈಜ್ಞಾನಿಕ ಮತ್ತು ಪ್ರಾಯೋಗಿಕವಾಗಿ ಚಿಂತಿಸಿದಾಗ ಯಶಸ್ವಿ ಯೋಜನೆ ಆಗಲಾರದು. ಬೇಡ್ತಿಯಿಂದ ಯಲ್ಲಾಪುರ ನಗರಕ್ಕೆ ಕುಡಿಯುವ ನೀರಿನ ಯೋಜನೆಯೇ ನೆನೆಗುಂದಿಗೆ ಬಿದ್ದಿರುವಂತಹ ಹಿನ್ನೆಲೆಯಲ್ಲಿ ಬೇಡ್ತಿ- ವರದಾ ನದಿ ಜೋಡಣೆ ಡಿ.ಪಿ.ಆರ್(ವಿವರ ಯೋಜನಾ ವರದಿ) ಸಿದ್ಧಪಡಿಸಿಕೊಂಡಿರುವುದು ಸರಕಾರದ ಜನವಿರೋಧಿ ನೀತಿಯಾಗಿದ್ದು ಇರುತ್ತದೆ. ತಮ್ಮ ಪಕ್ಷದ ಸರಕಾರ ಅಧಿಕಾರದಲ್ಲಿಇರದ ಸಂದರ್ಭದಲ್ಲಿ ತೋರಿಸುವ ಪರಿಸರ ಪ್ರೇಮ, ಉತ್ಸಾಹ ಹಾಗೂ ಇಚ್ಛಾಶಕ್ತಿ ತಮ್ಮ ಪಕ್ಷದ ಕೇಂದ್ರ ಮತ್ತು ರಾಜ್ಯ ಸರಕಾರ ಇದ್ದಾಗಲೂ ಪೂರ್ಣಪ್ರಮಾಣದಲ್ಲಿ ಹೋರಾಟದಲ್ಲಿ ಭಾಗವಹಿಸಿ ನದಿ ಜೋಡಣೆ ಯೋಜನೆ ಹಿಂದಕ್ಕೆ ಪಡೆಯಬೇಕೆಂದು ಜಿಲ್ಲೆಯ ಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.
ಸ್ವಾಮೀಜಿಯವರಿಗೆ ಬೆಂಬಲ: ಬೇಡ್ತಿ- ವರದಾ ನದಿ ಜೋಡಣೆಗೆ ವಿರೋಧಿ ನೇತ್ರತ್ವ ವಹಿಸಿರುವ ಶ್ರೀ.ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಹಾಸಂಸ್ಥಾನ ಇವರ ನೇತ್ರತ್ವದಲ್ಲಿ ಜರಗುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಾ, ಜಿಲ್ಲೆಯ ಸಚಿವ ಅರೇಬೈಲ್ ಶಿವರಾಮ್ ಹೆಬ್ಬಾರ, ಸಭಾಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತ ಕುಮಾರ ಹೆಗಡೆ ಹಾಗೂ ಇತರ ಜನಪ್ರತಿನಿಧಿಗಳು ಮುಕ್ತ ಮನಸ್ಸಿನಿಂದ ಸ್ವಾಮೀಜಿಯವರ ನೇತೃತ್ವದ ಹೋರಾಟಕ್ಕೆ ಬೆಂಬಲಿಸಲು ಹಿಂದೆಟು ಹಾಕದೇ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತಪಡಿಸಬೇಕೆಂದು ರವೀಂದ್ರ ನಾಯ್ಕ ಉಲ್ಲೇಖಿಸಿದ್ದಾರೆ.