ಶಿರಸಿ : ನಗರದ ಪ್ರಸಿದ್ಧ ದೇವಿಕೆರೆಯ ಉದ್ಯಾನವನಕ್ಕೆ ದಿ.ವಸಂತ ಶೆಟ್ಟಿಯವರ ಹೆಸರು ಇಡಬೇಕು ಎಂದು ಒತ್ತಾಯಿಸಿ ಅವರ ಅಭಿಮಾನ ಬಳಗದ ವತಿಯಿಂದ ನಗರಸಭೆಗೆ ಮನವಿ ಸಲ್ಲಿಸಲಾಯಿತು.
ಇತ್ತೀಚಿಗೆ ದೇವಿಕೆರೆ ಸರ್ಕಾರದ ವಿವಿಧ ಯೋಜನೆಗಳಡಿ ಅಭಿವೃದ್ಧಿಯಾಗಿದ್ದು, ದೇವಿಕೆರೆ ಉದ್ಯಾನವನವಾಗಿ ಮಾರ್ಪಾಡಾಗಿದೆ. ಈ ಹಿನ್ನಲೆಯಲ್ಲಿ ಅದರ ಅಭಿವೃದ್ಧಿಗೆ ಮೂಲಕಾರಣೀಕರ್ತರಾಗಿರುವ ದಿ.ವಸಂತ ಶೆಟ್ಟಿಯವರ ಹೆಸರನ್ನು ದೇವಿಕೆರೆಗೆ ಇಡಬೇಕು ಎಂದು ಆಗ್ರಹಿಸಲಾಯಿತು.
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸ್ವಾತಂತ್ರ್ಯ ಹೋರಾಟಗಾರ ಕಾಶಿನಾಥ ಮೂಡಿ ಅವರು, ನಾನು ಮೊದಲಿನಿಂದಲೂ ದೇವಿಕೆರೆ ನೋಡಿದ್ದೇನೆ. ಈಗ ಸಾಕಷ್ಡು ಅಭಿವೃದ್ಧಿ ಆಗಿದೆ. ಉತ್ತಮವಾಗಿದೆ. ಈಗ ವಸಂತ ಶೆಟ್ರು ನಮ್ಮ ಮಧ್ಯೆ ಇರಬೇಕಿತ್ತು. ಯಾರೂ ಓಡಾಡಲು ಹೆದರುವ ಸಮಯದಲ್ಲಿ ವಸಂತ ಶೆಟ್ರು ಅಭಿವೃದ್ಧಿ ಮಾಡಿದರು. ಕಾರಣ ಅವರ ಹೆಸರನ್ನು ಇಡುವುದು ಸೂಕ್ತವಾಗಿದೆ ಎಂದರು.
ಮನವಿ ನೀಡುವ ವೇಳೆ ಹಾಜರಿದ್ದ ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಅವರು, ದೇವಿಕೆರೆ ಅಭಿವೃದ್ಧಿ ಆಗುವ ಮೂಲಕ ಉದ್ಘಾಟನೆ ಆಗಿದೆ. ಈ ಕೆರೆ 30 ವರ್ಷಗಳ ಹಿಂದೆ ಕೊಳಚೆ ಪ್ರದೇಶವಾಗಿತ್ತು. ಅದನ್ನು ದಿ.ವಸಂತ ಶೆಟ್ಟಿಯವರು ಅಭಿವೃದ್ಧಿ ಪಡಿಸಿದರು. ಅಲ್ಲಿಯ ಭೂತೇಶ್ವರ ದೇವಾಲಯವನ್ನೂ ಅಭಿವೃದ್ಧಿ ಮಾಡಿದರು. ಕಾರಣ ಅವರ ಹೆಸರನ್ನು ಕೆರೆಗೆ ಇಡಬೇಕು ಎಂಬುದು ಎಲ್ಲರ ಅಭಿಪ್ರಾಯ ಆಗಿದೆ ಎಂದರು.
ಸಹಕಾರಿ ಧುರೀಣ ಎಸ್.ಪಿ.ಶೆಟ್ಟಿಯವರು ಮಾತನಾಡಿ, ದೇವಿಕೆರೆ ಈ ಹಿಂದೆ ಅಸಹ್ಯ ಹುಟ್ಟಿಸುವ ರೀತಿಯಲ್ಲಿತ್ತು. ಆಗ ವಸಂತ ಶೆಟ್ಟಿಯವರು ಅದನ್ನು ತಮ್ಮ ಶ್ರಮದಿಂದ ಅಭಿವೃದ್ಧಿ ಪಡಿಸಿದರು. ಕಾರಣ ಅವರ ಹೆಸರನ್ನು ದೇವಿಕೆರೆಗೆ ಇಡುವ ಮೂಲಕ ಯೋಗ್ಯ ಗೌರವ ಸಲ್ಲುವಂತೆ ಆಗಬೇಕು ಎಂದರು.
ಹಿರಿಯ ಶಿಕ್ಷಕ ಅಶೋಕ ಬಜೆಂತ್ರಿ ಮಾತನಾಡಿ, 1984 ರಲ್ಲಿ ಶಿರಸಿಗೆ ಬಂದಾಗ ವಸಂತ ಶೆಟ್ರು ಪರಿಚಯವಾದರು. ನಂತರ ಉತ್ತಮ ಓಡನಾಟ ಹೊಂದಿದವು. ಆ ಸಂದರ್ಭದಲ್ಲಿಯೇ ಶೆಟ್ರು ದೇವಿಕೆರೆಯನ್ನು ಅಭಿವೃದ್ಧಿಗೊಳಿಸಿದರು. ಕಾರಣ ಅವರ ಹೆಸರನ್ನು ದೇವಿಕೆರೆಗೆ ಇಡುವುದು ಸೂಕ್ತ ಎಂದರು.