ಹೊನ್ನಾವರ:ತಾಲೂಕಿನ ಕಡತೋಕಾದ ಜನತಾ ವಿದ್ಯಾಲಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಜಿ.ಪಂ. ಮಾಜಿ ಸದಸ್ಯೆ ಶ್ರೀಕಲಾ ಶಾಸ್ತ್ರಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿ, ಸುಂದರ ಭಾರತ ನಿರ್ಮಾಣವಾಗುವಲ್ಲಿ ಯುವಕರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು. ದೇಶ ನಮಗೇನು ಕೊಟ್ಟಿದ್ದೆ ಎನ್ನುವುದಕ್ಕಿಂತ. ದೇಶಕ್ಕಾಗಿ ನಾವು ಏನು ನೀಡಿದ್ದೇವೆ ಎನ್ನುವುದರ ಚಿಂತನೆ ನಡೆಸಬೇಕಿದೆ. ಸಹಾಯಹಸ್ತ, ಸ್ವಯಂಸೇವಾ ಗುಣವನ್ನು ಎನ್ಎಸ್ಎಸ್ ರೂಪಿಸಲಿದ್ದು, ವಿದ್ಯಾರ್ಥಿಗಳು ಇಂತಹ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಸಹಾಯಹಸ್ತ ಹಾಗೂ ಸಾಮಾಜಿಕ ಜವಬ್ದಾರಿ ಅರಿತು ವಿದ್ಯಾರ್ಥಿಗಳು ಮುನ್ನಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಉಪವಲಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ್ ಸಿ. ಮಾತನಾಡಿ, ನಾವು ಮರಗಳನ್ನು ರಕ್ಷಿಸಿದರೆ ಮರ ನಮ್ಮನ್ನು ರಕ್ಷಿಸಲಿದೆ. ಗ್ರಾಮೀಣ ಭಾಗದ ಸಮಸ್ಯೆ ಅರಿತು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಈ ಶಿಬಿರದ ಸಾರ್ಥಕತೆ ಸಿಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಪ್ರಾರ್ಚಾಯರಾದ ಡಾ.ಸುಮಂಗಲಾ ನಾಯಕ ಮಾತನಾಡಿ, ಎರಡು ವರ್ಷ ಕೊರೋನಾ ಕಾರಣದಲ್ಲಿ ಶಿಬಿರ ನಡೆಯಲು ಸಾಧ್ಯವಾಗಿರಲಿಲ್ಲ. ಶಿಸ್ತಿನಿಂದ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿ. ಕಾಲೇಜು ಉಪನ್ಯಾಸಕರು ಹಾಗೂ ಸಿಡಿಸಿ ಸದಸ್ಯರ ಸಹಕಾರದ ಮೇರೆಗೆ ಈ ಶಿಬಿರ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಭವಿಷ್ಯದ ಉಪಯುಕ್ತ ಮಾಹಿತಿ ಉಪನ್ಯಾಸಕರು ನೀಡಲಿದ್ದಾರೆ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಭಾಸ್ಕರ್ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ವೆಂಕಿತಾ ಸ್ವಾಗತಿಸಿ ವಂದಿಸಿದರು. ಅಪೂರ್ವ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಕಡತೋಕಾ ಎಸ್ಬಿಸಿ ಅಧ್ಯಕ್ಷ ಜಿ.ಆರ್.ಭಟ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಎಸ್.ಹೆಗಡೆ ಕಣ್ಣಿ, ಕಡತೋಕಾ ಕಾಲೇಜಿನ ಪ್ರಾರ್ಚಾಯ ದುರ್ಗಮ್ಮ ಪಿ.ಎಚ್., ಉಷಾ ಜಿ.ಭಟ್ ಇದ್ದರು.