ದಾಂಡೇಲಿ: ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಳಿ ನದಿಯಲ್ಲಿ ನೀರಿನ ಹರಿಯುವಿಕೆ ಪ್ರಮಾಣ ಕಡಿಮೆಯಾಗಿದೆ. ಕಳೆದ ಹಲವು ವರ್ಷಗಳಿಂದ ಇದೇ ಮೊದಲ ಬಾರಿಗೆ ಎಂಬಂತೆ ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಮೂರು ಘಟಕಗಳು ಸ್ಥಗಿತಗೊಂಡು ನಗರದಲ್ಲಿ ಆತಂಕದ ಹಾಗೂ ಭವಿಷ್ಯದಲ್ಲಿ ಏನಾಗಬಹುದೆಂಬ ಭಯ ಆವರಿಸತೊಡಗಿದೆ.
ಕಾಳಿ ನದಿಯಲ್ಲಿ ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಹರಿಯುವಿಕೆ ಕಡಿಮೆಯಾಗಿದೆ. ಹಾಗೆ ನೋಡಿದರೆ ಕಳೆದ ವರ್ಷ ಅತ್ಯಧಿಕ ಮಳೆ ಬಂದಿದ್ದರೂ ಈ ಬಾರಿ ನೀರಿನ ಹಪಾಹಪಿ ಎದುರಾಗಿದೆ. ಇನ್ನೂ ಈ ವರ್ಷ ಗಣೇಶಗುಡಿಯ ಸೂಪಾ ಜಲಾಶಯದಲ್ಲಿಯೂ ವಿದ್ಯುತ್ ಉತ್ಪಾದನೆಗೂ ಭಾರಿ ಹೊಡೆತವಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಕಾಳಿ ನದಿಯಲ್ಲಿ ನೀರಿನ ಪ್ರಮಾಣ ನಿರೀಕ್ಷೆಗೂ ಮೀರಿ ಕಡಿಮೆಯಾಗಿದೆ. ಹಳೆದಾಂಡೇಲಿ- ಬೈಲುಪಾರು ಸೇತುವೆಯ ಮೇಲೆ ನಿಂತು ನೋಡಿದಾಗ ಜಿಲ್ಲೆಯ ಜೀವನದಿ ನೀರಿಲ್ಲದೇ ಸೊರಗುತ್ತಿರುವುದು ಸ್ಪಷ್ಟವಾಗುತ್ತಿದೆ. ಇವೆಲ್ಲವುಗಳ ನಡುವೆಯು ಅಳ್ನಾವರಕ್ಕೆ ಕುಡಿಯುವ ನೀರು ಪೊರೈಕೆ ಆರಂಭವಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಉತ್ಪಾದನಾ ಚಟುವಟಿಕೆಗೆ ಕಾಳಿ ನದಿಯೆ ಆಸರೆ, ದಾಂಡೇಲಿಯ ಜನತೆಗೆ ಕಾಗದ ಕಾರ್ಖಾನೆಯೆ ಆಸರೆ. ಕಾರ್ಖಾನೆಗೆ ಮತ್ತು ದಾಂಡೇಲಿ, ಜೋಯಿಡಾ ಸುತ್ತಮುತ್ತಲ ಜನತೆಗೆ ಜೀವನದಾಸರೆಯಾಗಿರುವ ಕಾಳಿ ನದಿ ಬತ್ತುತ್ತಿರುವುದು ಭವಿಷ್ಯದ ಹಿತದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯೆಂದೆ ವಿಶ್ಲೇಷಿಸಲಾಗುತ್ತಿದೆ. ಇಂದು ಕಾಗದ ಕಾರ್ಖಾನೆಗೆ ಬಂದ ಪರಿಸ್ಥಿತಿ ಪ್ರವಾಸೋದ್ಯಮಕ್ಕೂ ಬಂದು, ಬೆಳೆದು ನಿಂತ ಪ್ರವಾಸೋದ್ಯಮವೂ ದಾರಿ ತಪ್ಪಬಹುದು. ಜನರ ಬದುಕಿಗೆ ತೊಂದರೆಯಾಗಬಹುದಾದ ನೀರಾವಾರಿ ಯೋಜನೆಗಳಾದರೂ ಏತಕ್ಕೆ ಬೇಕು ಎಂಬ ಪ್ರಶ್ನೆಗಳು ಇದೀಗ ದಾಂಡೇಲಿ ಜನತೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕೋಟ್..
ಈಗಲೆ ಈ ರೀತಿಯಾದರೆ ಮುಂದಿನ ದಿನಮಾನಗಳಲ್ಲಿ ಬಹಳಷ್ಟು ತೊಂದರೆಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು.– ಮೋಹನ ಹಲವಾಯಿ, ನಗರಸಭಾ ಸದಸ್ಯ