ಶಿರಸಿ: ಜಿಲ್ಲೆಯ ಪ್ರತಿಷ್ಟಿತ ವಿದ್ಯಾಲಯಗಳಲ್ಲೊಂದಾದ ಶಿರಸಿಯ ಎಂ.ಇ.ಎಸ್ ಪದವಿಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಜೂ.18, ಶನಿವಾರ ಮುಂಜಾನೆ 10.30 ಕ್ಕೆ ವಿದ್ಯಾಲಯದ ಕಟ್ಟಡ ಆವಾರದಲ್ಲಿ ನಡೆಯಲಿದೆ ಎಂದು ಎಂ.ಇ.ಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಹೇಳಿದರು.
ಅವರು ಗುರುವಾರ, ನಗರದ ಎಂ.ಇ.ಎಸ್ ಕಾಲೇಜಿನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ,1961 ರಲ್ಲಿ ಅಸ್ತಿತ್ವಕ್ಕೆ ಬಂದಿರುವ ನಮ್ಮ ಈ ಸಂಸ್ಥೆಯು ಕಳೆದ 60 ಕ್ಕೂ ಹೆಚ್ಚು ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತ ಬಂದಿದೆ.1962ರಲ್ಲಿ ಈ ಭಾಗದಲ್ಲಿ ಯಾವುದೇ ಕಾಲೇಜು ಇಲ್ಲದಿದ್ದಾಗ ಕಲಾ ಮತ್ತು ವಿಜ್ಞಾನ ವಿಭಾಗದ ಪ್ರಥಮ ವರ್ಷದೊಂದಿಗೆ ಈ ಕಾಲೇಜು ಪ್ರಾರಂಭವಾಯಿತು. ಮುಂದೆ ಪಿಯು ಹಾಗೂ ಪದವಿ ಬಗ್ಗೆ 2000ರವರೆಗೆ ಒಂದೇ ಕಾಲೇಜು ಇದ್ದಿತ್ತು. ಸರ್ಕಾರದ ಆದೇಶದಂತೆ 2001ರಲ್ಲಿ ಪಿಯು ವಿಭಾಗ, ಪದವಿ ಕಾಲೇಜಿನಿಂದ ಪ್ರತ್ಯೇಕಗೊಂಡು ಸ್ವತಂತ್ರ ಪಿಯು ಕಾಲೇಜು ಕಾರ್ಯ ಪ್ರಾರಂಭಿಸಿತು.
ಪದವಿಯಿಂದ ವಿಭಜನೆಯಾದ ಕಳೆದ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಎಂಇಎಸ್ ಪದವಿ ಪೂರ್ವ ಮಹಾವಿದ್ಯಾಲಯ ತಾಲೂಕು, ಜಿಲ್ಲೆ ಹಾಗೂ ರಾಜ್ಯದಲ್ಲಿ ಅತಿ ಉತ್ತಮ ಮಹಾವಿದ್ಯಾಲಯಗಳಲ್ಲಿ ಒಂದು ಎಂಬ ಕೀರ್ತಿಗೆ ಪಾತ್ರವಾಗಿದೆ. ಮಹಾವಿದ್ಯಾಲಯದ, ಸುಸಜ್ಜಿತ ವಿಶಾಲ ತರಗತಿ ಕೊಠಡಿಗಳು, ಸುವ್ಯವಸ್ಥಿತ ಪ್ರಯೋಗಾಲಯಗಳು, ಬೃಹತ್ ಗ್ರಂಥಾಲಯ, ಬುಕ್ ಬ್ಯಾಂಕ್ ಸೌಲಭ್ಯ “ಅನ್ನಪೂರ್ಣ” ಮಧ್ಯಾಹ್ನದ ಊಟದ ವ್ಯವಸ್ಥೆ ಹೊಂದಿದೆ ಎಂದರು.
ಮಹಾವಿದ್ಯಾಲಯದಲ್ಲಿ ಪಠ್ಯದ ಜೊತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ನುರಿತ ಅನುಭವಿ ಪ್ರಾಧ್ಯಾಪಕ ವರ್ಗ ನಿರಂತರವಾಗಿ ಶ್ರಮಿಸುತ್ತಾ ಕಳೆದ ಐದು ವರ್ಷಗಳಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 100 ಕ್ಕೆ 100 ಫಲಿತಾಂಶವನ್ನು ದಾಖಲಿಸಿರುವ ಅಂಕಗಳನ್ನು ಪಡೆದು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಮಹಾವಿದ್ಯಾಲಯದಲ್ಲಿ ಸಿಇಟಿ, ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದ್ದು, ಪರಿಣಾಮವಾಗಿ ನಮ್ಮ ವಿದ್ಯಾರ್ಥಿಗಳು ಉತ್ತಮ ಅಂಕವನ್ನು ದಾಖಲಿಸಿದ್ದಾರೆ. ವ್ಯಕ್ತಿತ್ವ ವಿಕಸನ ಮತ್ತು ದ್ವಿತೀಯ ಪಿಯುಸಿ ಕೋರ್ಸಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನವನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪಾಲಕರ ಸಭೆ ಹಾಗೂ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಎಂ.ಇ.ಎಸ್ ಆಡಳಿತ ಮಂಡಳಿ ಸದಸ್ಯರಾದ ಕೆ.ಎಸ್ ಶೆಟ್ಟರ್ ಮಾತನಾಡಿ, ಎಲ್ಲರ ಸಹಕಾರದಿಂದ ಕಾಲೇಜು ಕಟ್ಟಡ ಉತ್ತಮವಾಗಿ ನಿರ್ಮಾಣಗೊಂಡಿದೆ. ಜೂ. 18 ರಂದು ಶನಿವಾರ ಮುಂಜಾನೆ 10.30 ಘಂಟೆಗೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟನೆ ನೆರವೇರಿಸಲಿದ್ದು, ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಶಿವರಾಂ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ, ಆರ್.ವಿ.ದೇಶಪಾಂಡೆ, ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹನುಮಂತಪ್ಪ ಕೆ. ನಿಟ್ಟೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸುದ್ಧಿಗೋಷ್ಡಿಯಲ್ಲಿ ಎಂ.ಇ.ಎಸ್ ಉಪಸಮಿತಿಯ ಕೆ.ಬಿ.ಲೋಕೇಶ ಹೆಗಡೆ, ಎಂ.ಇ.ಎಸ್ ಖಜಾಂಚಿ ಸುಧೀರ ಭಟ್ಟ, ಎಂಇಎಸ್ನ ಕಟ್ಟಡ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ಭಟ್ಟ ಇದ್ದರು.
ವೀಡಿಯೋ ನೋಡಲು ಲಿಂಕ್ ಒತ್ತಿ:
https://youtu.be/XgsdMoI41i8