ಶಿರಸಿ:ನಗರದ ತೋಟಗಾರರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಕಾಂಗ್ರೆಸ್ನ ಉತ್ತರ ಕನ್ನಡ ಜಿಲ್ಲೆಯ ಆಯ್ದ ಪ್ರಮುಖರ ಚಿಂತನಾ ಶಿಬಿರದ ನಂತರ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಯುವಕರನ್ನು ಹೆಚ್ಚಿನ ಪ್ರಮಾಣದಲ್ಲಿ ಪಕ್ಷಕ್ಕೆ ಆಕರ್ಷಿಸಲು ಜಿಲ್ಲಾಮಟ್ಟದ ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಮುಖ್ಯವಾಗಿ ವಿಸ್ತೃತ ಚರ್ಚೆ ಮಾಡಿ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
ನಿರುದ್ಯೋಗ ಸಮಸ್ಯೆ ಜ್ವಲಂವಾಗಿದೆ. ವಿದ್ಯಾವಂತರಿಗೂ ಉದ್ಯೋಗ ಇಲ್ಲದಾಗಿದೆ. ಹೀಗಾಗಿ ಪಕ್ಷದ ಹೈಕಮಾಂಡ್ನಿಂದ ನಿರುದ್ಯೋಗಿ ಯುವಕರ ಪಟ್ಟಿ ಮಾಡಲು ಸೂಚನೆ ಬಂದಿದೆ. ಇಂಥವರಿಗೆ ಉದ್ಯೋಗ ಕೊಡಿಸಲು ಸರಕಾರಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರವನ್ನು ಒತ್ತಾಯಿಸಲಾಗುತ್ತದೆ. ಅಲ್ಲದೇ ಖಾಸಗಿ ಕ್ಷೇತ್ರದಲ್ಲೂ ಅವಕಾಶ ಕಲ್ಪಿಸುವುದಕ್ಕೆ ಪ್ರಯತ್ನಿಸುತ್ತೇವೆ. ಬೂತ್ ಹಂತದಿಂದ ಪಕ್ಷದ ಎಲ್ಲ ಸ್ತರದಲ್ಲೂ ಶೇ 50ರಷ್ಟು ಯುವಕರಿಗೆ, ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಬಿಜೆಪಿ ಸರಕಾರ ಬಂದ ಮೇಲೆ ಆಗಿರುವ ಬೆಲೆ ಏರಿಕೆಯಿಂದ ಬಡವರು, ಮಧ್ಯಮವರ್ಗದವರಿಗೆ ತೊಂದರೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ 30 ಮನೆ ಮಾತ್ರ ನೀಡಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಪಂಚಾಯಿತಿಯಿಂದ ಜಿಲ್ಲಾಮಟ್ಟದವರೆಗೂ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಇನ್ನೊಂದೆಡೆ ಕಾಂಗ್ರೆಸ್ ಶಕ್ತಿಯನ್ನು ಬೆಳೆಸಬೇಕು. ಪ್ರಜಾಪ್ರಭುತ್ವದಲ್ಲಿ ಹೋರಾಟದ ಮಾರ್ಗದ ಮೂಲಕ ಜನತೆಗೆ ನ್ಯಾಯ ಒದಗಿಸಬೇಕಿದೆ ಎಂದರು.
ಜ್ಯಾತ್ಯಾತೀತ ವ್ಯವಸ್ಥೆಯಲ್ಲಿ ಇನ್ನಷ್ಟು ವಿಶ್ವಾಸ ಮೂಡಿಸಬೇಕಿತ್ತು. ಆದರೆ ದೇಶದಲ್ಲಿ ಕೋಮುಗಲಭೆ ಸೃಷ್ಠಿ ಆಗುತ್ತಿರುವುದು ರಾಷ್ಟ್ರಕ್ಕೆ ಗಂಡಾಂತರ ಪರಿಸ್ಥಿತಿ. ಪ್ರೀತಿ, ಸೌಹಾರ್ದತೆ, ವಿಶ್ವಾಸ ಇದ್ದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಜಿಲ್ಲೆಯ ಅರಣ್ಯ ಅತಿಕ್ರಮಣ ಸಮಸ್ಯೆ ಬಗ್ಗೆ ಈಗ ಮೀಟಿಂಗ್ ಸಹ ಆಗುತ್ತಿಲ್ಲ. ನಾನು ಸಚಿವನಿದ್ದಾಗ ಸಭೆ ನಡೆಸಿದ್ದು, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗ, ತಾಳಗುಪ್ಪ ಶಿರಸಿ ರೈಲು ಮಾರ್ಗ ಮರೆತೇ ಹೋಗಿದೆ ಎಂದು ದೇಶಪಾಂಡೆ ಆಕ್ಷೇಪಿಸಿದರು.
ಚಿಂತನಾ ಶಿಬಿರದಲ್ಲಿ 500ಕ್ಕೂ ಅಧಿಕ ಆಯ್ದ ನಾಯಕರು ಪಾಲ್ಗೊಂಡು ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ. ಅಲ್ಪಸ್ವಲ್ಪ ಭಿನ್ನಮತ ಇದ್ದರೂ ಮರೆತಿದ್ದಾರೆ. ವಿಧಾನಸಭಾ ಚುನಾವಣೆ ವರ್ಷದ ಅವಧಿ ಬಾಕಿ ಇರುವ ಹಿನ್ನೆಲೆಯಲ್ಲಿ ಪಕ್ಷವನ್ನು ಸನ್ನದ್ಧಗೊಳಿಸಬೇಕಿದೆ. ಜಿಲ್ಲೆಯ ಸಮಸ್ಯೆಗಳನ್ನು ಪಟ್ಟಿ ಮಾಡಿ ಪ್ರಣಾಳಿಕೆ ಸಿದ್ಧಪಡಿಸುತ್ತೇವೆ. ಜಿಲ್ಲೆಯ ಎಲ್ಲ ವಿಧಾನಸಭಾ ಚುನಾವಣೆ ಗೆಲ್ಲಲು ನವ ಸಂಕಲ್ಪ ಶಿಬಿರ ಮಾಡಿದ್ದೇವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಚಿಂತನಾ ಶಿಬಿರದಲ್ಲಿ 14 ಬ್ಲಾಕ್ಗಳ ಪ್ರತಿನಿಧಿಗಳನ್ನು ಒಳಗೊಂಡು 5 ಸಮಿತಿ ರಚಿಸಲಾಗಿದೆ ಎಂದರು.
ಪ್ರಮುಖರಾದ ಜೆ.ಡಿ.ನಾಯ್ಕ, ರಮಾನಂದ ನಾಯಕ, ನಿವೇದಿತ್ ಆಳ್ವಾ, ಪ್ರಶಾಂತ ದೇಶಪಾಂಡೆ, ಎಸ್.ಕೆ.ಭಾಗ್ವತ, ಸುಷ್ಮಾ ರಾಜಗೋಪಾಲ ರೆಡ್ಡಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಶೆಟ್ಟಿ, ನಾಗರಾಜ ನಾರ್ವೆಕರ್, ದೀಪಕ ದೊಡ್ಡೂರು ಮುಂತಾದವರು ಪಾಲ್ಗೊಂಡರು.
ಕೋಟ್…
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಯುವ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರದ ಬಿಜೆಪಿ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ. 2012ರಲ್ಲೇ ಮುಗಿದ ಪ್ರಕರಣವನ್ನು ಮತ್ತೆ ಕೆದಕಿದೆ. ಇದನ್ನು ವಿರೋದಿಸಿ ಕಾಂಗ್ರೆಸ್ನವರು ಪ್ರತಿಭಟನೆ ಮಾಡಿದರೆ ಲಾಠಿ ಚಾರ್ಚ್ ಮಾಡುತ್ತಿದೆ. ಇದೆಲ್ಲ ಸರಿಯಾದ ಕ್ರಮವಲ್ಲ.– ಆರ್.ವಿ.ದೇಶಪಾಂಡೆ, ಮಾಜಿ ಸಚಿವ