ಹಳಿಯಾಳ:ರಕ್ತದಾನಿಗಳ ದಿನಾಚರಣೆಯ ನಿಮಿತ್ತವಾಗಿ ನಗರದ ಹಾಗೂ ಜಿಲ್ಲೆಯ ಶ್ರೇಷ್ಠ ರಕ್ತದಾನಿ ಹಾಗೂ ರಕ್ತದಾನ ಶಿಬಿರಗಳ ಯಶಸ್ವಿ ಸಂಘಟಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸುಧೀರ ರಾಮು ಶೆಟ್ಟಿ ಅವರನ್ನು ಕರ್ನಾಟಕ ರಾಜ್ಯಮಾನವ ಜನಪರ ಮಿಶನ್ ವತಿಯಿಂದ ನಗರ ಸಂತೋಷ್ ಹೊಟೇಲ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ದೇಹದಿಂದ ಕೇವಲ ಒಂದು ಹನಿ ರಕ್ತ ಹರಿದು ಹೋದರೂ ಭಯಪಡುವಂತಹ ಜನರಿರುವ ಸಂದರ್ಭದಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದರ್ಶಗಳು ಮತ್ತು ರಾಷ್ಟ್ರೀಯ ವಾದಗಳನ್ನು ತಮ್ಮ ಕಣಕಣದಲ್ಲಿಯೂ ಮೈಗೂಡಿಸಿಕೊಂಡಿರುವ ಎಂಬಿಎ ಪಧವಿಧರ ಸುಧೀರ ಶೆಟ್ಟಿ ಅವರು ತಮ್ಮ ಕಿರು ವಯಸ್ಸಿನಿಂದ ಈವರೆಗೆ ಒಟ್ಟು 27 ಬಾರಿ ಸ್ವಯಂ ರಕ್ತದಾನ ಮಾಡಿ ಅನೇಕರ ಜೀವ ಉಳಿಸಿದ ಕೀರ್ತಿಗೆ ಭಾಜನರಾದ್ದಾರೆ.ಜೊತೆಗೆ ದಾಂಡೇಲಿ ನಗರದಲ್ಲಿ ಇದುವರೆಗೆ ಸತತವಾಗಿ 14 ಬಾರಿ ರಕ್ತದಾನ ಶಿಬಿರ ಆಯೋಜಿಸಿ ಲಕ್ಷಾಂತರ ಜನರ ಜೀವ ಉಳಿಸಿದ ಹಿರಿಮೆಯನ್ನು ಹೊಂದಿದ್ದಾರೆ. ಇಂಥಹ ಮಾನವೀಯ ಹಾಗೂ ಜನಪರ ಕಾರ್ಯದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿರುವಂತಹ ಉತ್ಸಾಹಿ ಯುವಕ ಸುಧೀರ ಶೆಟ್ಟಿ ಅವರನ್ನು ಕರ್ನಾಟಕ ರಾಜ್ಯ ಮಾನವ ಜನಪರ ಮಿಶನ್ ವತಿಯಿಂದ ಅರ್ಹವಾಗಿಯೇ ಸನ್ಮಾನಿಸಿ ಗೌರವಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಪೀರೋಜ್ ಪೀರಜಾದೆ ಮಾತನಾಡಿ, ಶ್ರೇಷ್ಠತೆಯನ್ನು ಮೈಗೂಡಿಸಿಕೊಂಡಿರುವ ಸುಧೀರ ಶೆಟ್ಟಿ ಅವರು ಸರ್ವರಿಗೂ ಮಾದರಿಯಾಗಿ ನಿಂತಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸುಧೀರ ಶೆಟ್ಟಿ ನೇತೃತ್ವದ ತಂಡ ಮಾಡಿದ ಸೇವಾಕೈಂಕರ್ಯವನ್ನು ಎಂದೆಂದಿಗೂ ಮರೆಯಲಾಗದು. ದೇವರು ಅವರಿಗೆ ಇಂಥಹ ಪರಮ ಶ್ರೇಷ್ಠ ಕಾರ್ಯ ಕೈಗೊಳ್ಳಲು ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಜೊತೆಗೆ ಇನಷ್ಟು ಹೆಚ್ಚಿನ ಯುವಕರು ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧೀರ ಶೆಟ್ಟಿ, ರಕ್ತದಾನದಂತಹ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಳ್ಳುಲು ಕ್ರೀಯಾಶೀಲ ತಂಡ ನನ್ನ ಜೊತೆಗಿದೆ. ಗೆಳೆಯರ ಬಳಗದ ಪ್ರೀತಿ, ಪ್ರೋತ್ಸಾಹವೆ ಪ್ರೇರಣಾದಾಯಿಯಾಗಿದೆ. 18 ರಿಂದ 60 ವರ್ಷ ಒಳಗಿನ ಆರೊಗ್ಯವಂತರು ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡದಿದ್ದರೆ ಇನ್ನೊಬ್ಬರ ಜೀವ ಉಳಿಸುವುದು ಕಷ್ಟ. ಪ್ರತಿ ವರ್ಷ ಮಾರ್ಚ್ 23 ರಂದು ಭಗತ್ಸಿಂಗರವರ ಹುತಾತ್ಮ ದಿನದ ಅಂಗವಾಗಿ ದಾಂಡೇಲಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತದೆ. ಆರೋಗ್ಯವಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಇನ್ನೊಬ್ಬರ ಜೀವ ಉಳಿಸುವಂತಹ ಸತ್ಕಾರ್ಯಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.ಸನ್ಮಾನ ಸಮಾರಂಭದಲ್ಲಿ ರವಿ ಸುತಾರ,ಬಲವಂತ ಬೊಮ್ಮನಹಳ್ಳಿ, ಸಭಾಷಿನ್ ಡಿಮೆಲ್ಲೋ, ಸಾದಿಕ್ ಮುಲ್ಲಾ, ಮೊದಲಾದವರು ಉಪಸ್ಥಿತರಿದ್ದರು. ರಾಜೇಂದ್ರ ಸೊಲಾಪುರಿ ನಿರೂಪಿಸಿದರು, ರಫೀಕ ಹುದ್ದಾರ ವಂದಿಸಿದರು.