ಕಾರವಾರ: ಇಲ್ಲಿನ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ನಾಗಪ್ಪ ಅವರಿಗೆ ಇತ್ತೀಚಿಗೆ ಧಾರವಾಡದ ವಿದ್ಯಾಧರ ಕನ್ನಡ ಪ್ರತಿಷ್ಠಾನ ಮತ್ತು ಬೆಂಗಳೂರಿನ ಭಕ್ತಿ ಕಾವ್ಯಯಾನ ಪ್ರತಿಷ್ಠಾನ ಸಂಸ್ಥೆಯ ವತಿಯಿಂದ ದ.ರಾ.ಬೇಂದ್ರೆ ನೆನಪಿನ ದತ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನಾಗಪ್ಪ ಅವರು ಬರೆದಿರುವ ‘ನೆತ್ತರಲಿ ನೆಂದ ಹೂವು’ ಎಂಬ ಚೊಚ್ಚಲ ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿಯು ಪ್ರೋತ್ಸಾಹಕರ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಕನ್ನಡ ನುಡಿ ತೇರು- 2022 ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಅವರಿಗೆ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಮುತಾಲಿಕ ದೇಸಾಯಿ ಸೇರಿದಂತೆ ವಿವಿಧ ಸಾಹಿತಿಗಳು, ಗಣ್ಯರು ಸನ್ಮಾನಿಸಿ ಗೌರವಿಸಿದರು. ಅಭಿನಂಧನಾ ಪತ್ರ, ಸ್ಮರಣಿಕೆ ಮತ್ತು ನಗದು ಪ್ರಶಸ್ತಿ, ಬಹುಮಾನ ನೀಡಿ ಗೌರವಿಸಲಾಯಿತು.