ಶಿರಸಿ: ಏಪ್ರಿಲ್ ತಿಂಗಳ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ರೂ.5 ಪ್ರೋತ್ಸಾಹಧನವು ಆಧಾರ್ ಜೋಡಣೆಯಾದ ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗೆ ಜೂ.10ರಂದು ಜಮಾ ಆಗಿದ್ದು, 2022-2023ನೇ ಸಾಲಿನ ಸಹಕಾರಿ ವರ್ಷದ ಮೊದಲ ರೂ.5 ಪ್ರೋತ್ಸಾಹ ಧನವು ಈಗ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆದಂತಾಗಿದೆ ಎಂದು ಧಾರವಾಡ ಸಹಕಾರ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಹಾಗೂ ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದ್ದಾರೆ.
ಮೇ ತಿಂಗಳ ಪ್ರೋತ್ಸಾಹಧನವು ಮಾಹಿತಿಯನ್ನು ಕ್ಷೀರಸಿರಿ ತಂತ್ರಾಶದಲ್ಲಿ ಈಗಾಗಲೇ ಅಳವಡಿಸಲಾಗಿದ್ದು, ರಾಜ್ಯದಾದ್ಯಂತ ಇರುವ 15 ಒಕ್ಕೂಟಗಳ ಪೈಕಿ ಎಲ್ಲಾ ಒಕ್ಕೂಟಗಳಿಗಿಂತ ಮೊದಲು ಮೇ ತಿಂಗಳ ಪ್ರೋತ್ಸಾಹಧನವು ಮಾಹಿತಿಯನ್ನು ಕ್ಷೀರಸಿರಿ ತಂತ್ರಾಶದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ಅಳವಡಿಸಲಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮೇ ತಿಂಗಳ ರೂ.5 ಪ್ರೋತ್ಸಾಹಧನವು ಕೂಡ ಶೀಘ್ರದಲ್ಲೇ ರೈತರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮಾ ಆಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ಪ್ರೋತ್ಸಾಹಧನ ಜಮಾ ಆಗದ ರೈತರು ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದ್ದಾರೆ.