
ಮುಂಡಗೋಡ: ತಾಲೂಕಿನ ಕಾತೂರ ಅರಣ್ಯ ವಲಯದ ರಾಮಾಪುರ ಅರಣ್ಯದಲ್ಲಿ ಶುಕ್ರವಾರ ರಾತ್ರಿ ವೇಳೆ ಬೆಲೆ ಬಾಳುವ ಸಾಗವಾನಿ ಮರಗಳನ್ನು ಕಡಿದು ಓಮಿನಿಯಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ಮಾಡಿ ಓಮಿನಿ ಹಾಗೂ 50 ಸಾವಿರ ರೂಪಾಯಿಯ ಸಾಗವಾನಿ ತುಂಡುಗಳ ಸಮೇತ ಆರೋಪಿಯನ್ನು ಬಂಧಿಸಿದ ಘಟನೆ ಜರುಗಿದೆ.
ರಾಮಾಪೂರ ಗ್ರಾಮದ ಶೆಟ್ಟಪ್ಪ ಭೋವಿವಡ್ಡರ ಬಂಧಿತ ಆರೋಪಿಯಾಗಿದ್ದು, ಈತನೊಂದಿಗೆ ಇನ್ನೂ ಕೆಲವು ಆರೋಪಿಗಳು ಹುಡೇಲಕೊಪ್ಪ ಗ್ರಾಮದ ಅರಣ್ಯದಲ್ಲಿ ಬೆಲೆಬಾಳುವ ಸಾಗುವಾನಿ ಮರಗಳನ್ನು ಕಡಿದು ತುಂಡುಗಳನ್ನು ಮಾಡಿ ಓಮಿನಿಯಲ್ಲಿ ಸಾಗಿಸುತ್ತಿದ್ದರು.
ಗಸ್ತು ತಿರುಗಾಡುತ್ತಿರುವ ಅಧಿಕಾರಿಗಳು ಅನುಮಾನಗೊಂಡ ಓಮಿನಿಯನ್ನು ಪರಿಶೀಲಿಸಲು ಮಂದಾದಾಗ ಆರೋಪಿಗಳು ಸಾಗವಾನಿ ತುಂಡುಗಳು ತುಂಬಿದ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಗುಂಪಿನಲ್ಲಿದ್ದ ಒಬ್ಬ ಆರೋಪಿ ಶೆಟ್ಟಪ್ಪನನ್ನು ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸುಮಾರು 50 ಸಾವಿರ ರೂ ಮೌಲ್ಯದ ಸಾಗವಾನಿ ತುಂಡುಗಳನ್ನು ಹಾಗೂ ಓಮಿನಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉಳಿದ ಆರೋಪಿಗಳು ತಲೆ ಮರಿಸಿಕೊಡಿದ್ದು ಈ ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಶೋಧ ಕಾರ್ಯ ನಡೆಸಿದ್ದಾರೆ.
ಡಿ.ಸಿ.ಎಫ್ ಗೋಪಾಲಕೃಷ್ಣ ಭಟ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್ ಶ್ರೀಶೈಲ ವಾಲಿ, ಕಾತೂರ ವಲಯ ಅರಣ್ಯಧಿಕಾರಿ ಅಜಯ ನಾಯ್ಕ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಚಂದ್ರಕಾಂತ ಮುಕ್ರಿ, ಅರುಣಕುಮಾರ ನಡುವಿನಹಳ್ಳಿ, ಅರಣ್ಯ ರಕ್ಷಕರಾದ ಕಿರಣ ಹಂಚಿನಮನಿ, ಮಂಜುನಾಥ ದೊಡ್ಡಣ್ಣನವರ, ಮುತ್ತುರಾಜ ಹಳ್ಳಿ, ನಾರಾಯಣ ಓಣಿಕೇರಿ, ಪ್ರಕಾಶ ಬಳ್ಳಾರಿ, ಬಸವರಾಜ ವಾಲ್ಮೀಕಿ ಸೇರಿದಂತೆ ಇತರೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.