
ಶಿರಸಿ: ಶ್ರೀಪಾದ ಹೆಗಡೆ ಕಡವೆಯವರ ಪುಣ್ಯ ತಿಥಿಯ ಅಂಗವಾಗಿ ಮುಂಡಗನಮನೆ ಗ್ರುಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಆವಾರದಲ್ಲಿ ಪುಷ್ಪನಮನ ಕಾರ್ಯಕ್ರಮ ನಡೆಸಲಾಯಿತು.
ಸಂಘಧ ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ವೈದ್ಯ ಮಾತನಾಡಿ , ದಿ.ಕಡವೆಯವರು ರೈತರ ದೇವರು. ನಮ್ಮ ಜಿಲ್ಲೆಯಲ್ಲಿ ಟಿ ಎಸ್ ಎಸ್ ಸಂಸ್ಥೆಯು ಸ್ಥಾಪಿತವಾಗಿ 100 ವರ್ಷ ಸಮೀಪಿಸುತ್ತಿದ್ದರೂ, ಟಿಎಸ್ಎಸ್ ಸ್ಥಾಪಿತವಾದ ನಂತರ ಜನಿಸಿದ ಕಡವೆ ಹೆಗಡೆಯವರು, ‘ಟಿ ಎಸ್ ಎಸ್ ಎಂದರೆ ಮಾನ್ಯ ಕಡವೆ ಹೆಗಡೆಯವರು’ ಅನ್ನುವಂತೆ ಪ್ರಕಾಶಿಸಿದರು. ಇದಕ್ಕೆ ಮುಖ್ಯ ಕಾರಣ ಟಿ ಎಸ್ ಎಸ್ ಆಡಳಿತ ಚುಕ್ಕಾಣಿ ಹಿಡಿದ ಇವರು ದೂರದೃಷ್ಟಿಯಿಂದ ಎಲ್ಲಾ ರೈತರ ಬೆಳೆಗಳಿಗೆ ಸುವ್ಯವಸ್ಥಿತ ಮಾರುಕಟ್ಟೆ ವ್ಯವಸ್ಥೆಯನ್ನು ಕೈಗೊಂಡು, ಸಹಕಾರಿ ವ್ಯವಸ್ಥೆಯಲ್ಲಿ ಎಲ್ಲ ರೈತರನ್ನೂ ಒಳಗೊಳ್ಳುವಂತೆ ಮಾಡಿದ್ದು ,ಅಲ್ಲದೇ ಜಿಲ್ಲೆಗೆ ಟಿ ಎಸ್ ಎಸ್ ಸಂಸ್ಥೆಯ ವ್ಯಾಪ್ತಿಯಿದ್ದಂತೆ, ಎರಡು ರಾಜ್ಯಗಳ ಅಡಿಕೆ ಮಾರುಕಟ್ಟೆಗೆ ಸಹಕಾರಿ ವ್ಯವಸ್ಥೆಯಲ್ಲಿ ಒಳಗೊಳ್ಳುವಂತೆ ಕ್ಯಾಂಪ್ಕೊ ಸಂಸ್ಥೆಯನ್ನು ಹುಟ್ಟುಹಾಕಲು ಹೆಗಲುಕೊಟ್ಟರು. ಹಾಗೆಯೇ ಟಿ ಎಸ್ ಎಸ್ ಪರಿಮಿತಿಯೊಂದೆ ಸಾಕಾಗದೆಂಬ ಧೋರಣೆಯಿಂದ ಅಂಗಸಂಸ್ಥೆಗಳನ್ನು ಉದಾಹರಣೆಗೆ ಎಗ್ರಿಕಲ್ಚರ್ ಡೆವಲೊಪಮೆಂಟ್ ಸೊಸೈಟಿ, ಒಕ್ಕಲುತನ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘಗಳನ್ನೂ ಸ್ಥಾಪಿಸಿ, ಅಲ್ಲದೇ ಎಲ್ಲಾ ಪ್ರಾಥಮಿಕ ಸಹಕಾರಿ ಸಂಘಗಳ ವಾರ್ಷಿಕ ಸರ್ವಸಾಧಾರಣ ಸಭೆಗಳಲ್ಲಿ ಹಾಜರಾಗಿ ಈ ಸಂಸ್ಥೆಗಳ ಮೂಲಕ ಟಿ ಎಸ್ ಎಸ್ ನಲ್ಲಿ ವ್ಯವಹರಿಸುವಂತೆ ರೈತರನ್ನು ಹುರಿದುಂಬಿಸಿದರು. ಇಂತಹ ಮಹಾನ್ ವ್ಯಕ್ತಿಯನ್ನು ನೆನೆಯುವುದು ಪ್ರತಿ ರೈತರ ಪುಣ್ಯದ ಕೆಲಸ. ಇಂತಹ ವ್ಯಕ್ತಿಯನ್ನು ಸರಕಾರವು ಗುರುತಿಸಿ ‘ಸಹಕಾರಿ ರತ್ನ’ ಪ್ರಶಸ್ತಿಗಳ ಮೂಲಕ ಗೌರವಿಸಬೇಕಿತ್ತು. ಈಗಲಾದರೂ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲಿ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಘದ ಮಾರುಕಟ್ಟೆ ಸಲಹೆಗಾರ ವಿ. ಆರ್. ಹೆಗಡೆ ಮತ್ತಿಘಟ್ಟ ಸ್ವಾಗತಿಸಿದರೆ, ಮುಖ್ಯ ಕಾರ್ಯನಿರ್ವಾಹಕ ನಾಗಪತಿ ಭಟ್ ವಂದಿಸಿದರು.