ದಾಂಡೇಲಿ: ಜೀವನದ ಉನ್ನತಿಗೆ ಶಿಕ್ಷಣವೊಂದೆ ಶ್ರೀರಕ್ಷೆ. ಇಂದು ಕಾಲ ಬದಲಾಗಿದೆ. ಶೈಕ್ಷಣಿಕವಾಗಿ ರಾಷ್ಟ್ರ ಪ್ರಗತಿಯೆಡೆಗೆ ಸಾಗುತ್ತಿದೆ. ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣದ ಕೊಡುಗೆ ಮಹತ್ವಪೂರ್ಣವಾಗಿದೆ. ಜೀವನದಲ್ಲಿ ಸಿಗುವ ಮಹತ್ವದ ಘಟ್ಟವಾದ ವಿದ್ಯಾರ್ಥಿ ಜೀವನವನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು, ಸತತ ಅಧ್ಯಯನ ಶೀಲರಾದಾಗ ಜೀವನದಲ್ಲಿ ಸಫಲತೆಯನ್ನು ಸಾಧಿಸಲು ಸಾಧ್ಯವಿದೆ ಎಂದು ದಾಂಡೇಲಿಯ ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಹೇಳಿದರು.
ಅವರು ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದು ಸಾಧನೆಗೈದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಸಾಧನೆಗೈದ ವಿದ್ಯಾರ್ಥಿಗಳು ಮುಂದೆಯು ಶೈಕ್ಷಣಿಕ ಸಾಧನೆಯನ್ನು ಮಾಡುವಂತಾಗಲೆಂದು ಶುಭ ಹಾರೈಸಿದರು.
ರೋಟರಿ ಶಿಕ್ಷಣ ಸಂಸ್ಥೆಯ ಕರ್ಯದರ್ಶಿ ಅರುಣ್ ನಾಯಕ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ರೋಟರಿ ಶಿಕ್ಷಣ ಸಂಸ್ಥೆಯು ಮೊದಲ ಆಧ್ಯತೆಯನ್ನು ನೀಡುತ್ತಾ ಬಂದಿದೆ. ಕಲಿಕೆಯ ಜೊತೆಗೆ ಸಂಸ್ಕತಿ, ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳುವ ನೈತಿಕ ಶಿಕ್ಷಣಕ್ಕೂ ಇಲ್ಲಿ ಒತ್ತು ನೀಡಲಾಗುತ್ತಿದೆ. ಇದರ ಫಲವಾಗಿ ಶಾಲೆಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ರೋಟರಿ ಪ್ರಮುಖರುಗಳಾದ ಎಚ್.ವೈ.ಮೆರ್ವಾಡೆ, ಎಸ್.ಜಿ.ಬಿರದಾರ ಅವರುಗಳು ಉತ್ತಮ ಫಲಿತಾಂಶವನ್ನು ತಂದುಕೊಡುವಲ್ಲಿ ಕಾರಣೀಕರ್ತರಾದ ಶಿಕ್ಷಕ ವೃಂದವನ್ನು ಹಾಗೂ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಅಭಿನಂದಿಸಿ, ಜೀವನದಲ್ಲಿ ಮಹತ್ವದ ಗುರಿಯನ್ನು ಇಟ್ಟು, ಗುರಿ ಸಾಧನೆಗೆ ಸತತ ಪರಿಶ್ರಮವನ್ನು ಪಟ್ಟು ಗುರಿ ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಯಿನಿ ಕಲ್ಪನಾ ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಪ್ರೌಢಶಾಲೆಯ ಶೈಕ್ಷಣಿಕ ಸಾಧನೆಗೆ ರೋಟರಿ ಶಿಕ್ಷಣ ಸಂಸ್ಥೆಯ ಮಾರ್ಗದರ್ಶನ, ಶಿಕ್ಷಕ ವೃಂದದವರ ಪ್ರಾಮಾಣಿಕ ಕರ್ತವ್ಯನಿರ್ವಹಣೆ ಹಾಗೂ ವಿದ್ಯಾರ್ಥಿಗಳ ಬದ್ದತೆಯೆ ಪ್ರಮುಖ ಕಾರಣವಾಗಿದೆ ಎಂದು ಸಹಕರಿಸಿದ ಸರ್ವರಿಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ರೋಟರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ಮೋಹನ ಪತ್ತಾರ್, ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸುನೀತಾ.ಎ.ಸಾಲಾಸ್ಕರ್ ಉಪಸ್ಥಿತರಿದ್ದರು. ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರದ ಜೊತೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.