ಕುಮಟಾ: ಪಟ್ಟಣದ ಕೆನರಾ ಕಾಲೇಜು ಸೊಸೈಟಿಯ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಯೋಗದಿನ 2022ರ ಪ್ರಯುಕ್ತ ಯೋಗ ಹಾಗೂ ಆರೋಗ್ಯದ ಕುರಿತ ಒಂದು ದಿನದ ಕಾರ್ಯಾಗಾರ ನಡೆಯಿತು.
ಮಹಾವಿದ್ಯಾಲಯದ ಎನ್ಸಿಸಿ ನೇವಿ ಹಾಗೂ ಆರ್ಮಿ, ಎನ್ಎಸ್ಎಸ್, ಸ್ಕೌಟ್, ರೋವರ್ಸ್ ಮತ್ತು ರೆಡ್ ಕ್ರಾಸ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಗಾರದಲ್ಲಿ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಪ್ರೊ.ಜಿ.ಡಿಭಟ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಬೇಕು. ಯೋಗದಿಂದ ಶಾರೀರಿಕವಾಗಿ ಜೊತೆಗೆ ಮಾನಸಿಕವಾಗಿಯೂ ಸಧೃಡರಾಗಿರಲು ಸಾಧ್ಯವಿದೆ ಎಂದರು.
ಕೆಡೆಟ್ ಬೀರು ಗುಂಡ್ರೆ ಯೋಗ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಕಾರ್ಯಾಗಾರದಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ಡಾ.ಎಸ್.ವಿ.ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್ ಸಿಸಿ ನೇವಲ್ ಆಫಿಸರ್ ಲೆಪ್ಟಿನಂಟ್ ವಿ.ಆರ್. ಶಾನಭಾಗ ಸ್ವಾಗತಿಸಿದರು. ಕಾರ್ಯಾಗಾರದಲ್ಲಿ ಡಾ.ಎನ್.ಡಿ.ನಾಯ್ಕ, ಪ್ರೊ.ವಿನಾಯಕ ಭಟ್, ಪ್ರೊ.ಪ್ರತೀಕ ಹೆಗಡೆ ಉಪಸ್ಥಿತರಿದ್ದರು.