ಶಿರಸಿ: ತಾಲೂಕಿನ ನರೇಬೈಲ್ನ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಯಶಸ್ವಿನಿ ಹೆಗಡೆ ಮತ್ತು ಅನುದೀಪ ಹೆಗಡೆ 2021-22 ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದ ಮರು ಮೌಲ್ಯಮಾಪನದಲ್ಲಿ 625 ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ಮೊದಲು 624 ಅಂಕಗಳು ಲಭಿಸಿದ್ದರಿಂದ ಅವರು 2 ನೇ ಸ್ಥಾನವನು ಪಡೆಯುವಂತಾಗಿತ್ತು. ಆದರೆ ಈ ವಿದ್ಯಾರ್ಥಿಗಳು ಫಲಿತಾಂಶ ಬಂದ ಸಂದರ್ಭದಲ್ಲಿಯೂ 625 ಕ್ಕೆ 625 ಅಂಕಗಳನ್ನು ಪಡೆಯುವ ಭರವಸೆ ವ್ಯಕ್ತಪಡಿಸಿದರು. ಹೀಗಾಗಿ ಮರು ಮೌಲ್ಯಮಾಪನಕ್ಕಾಗಿ ಅರ್ಜಿಯನ್ನು ಸಲ್ಲಿಸಿ, ಫಲಿತಾಂಶವು ಪ್ರಕಟಗೊಂಡಿದ್ದು ವಿದ್ಯಾರ್ಥಿಗಳು ರಾಜ್ಯದ ಟಾಪರ್ಸ್ ಆಗಿ ಗುರುತಿಸಿಕೊಂಡಿದ್ದಾರೆ.
ನಿರಂತರ ಪರಿಶ್ರಮ ಹಾಗೂ ಶಾಲಾ ಮಟ್ಟದಲ್ಲಿ ನಡೆಸಿದ ಎಲ್ಲಾ ಪರೀಕ್ಷೆಗಳಲ್ಲಿಯೂ ಈ ವಿದ್ಯಾರ್ಥಿಗಳು ಪೂರ್ಣ ಅಂಕವನ್ನು ಪಡೆದಿದ್ದರು. ಅದೇ ರೀತಿ ಅಂಕಿತ್ ಹೆಗಡೆ 620/625 (ಮೊದಲಿನ ಅಂಕ616/625) ಆದಿತ್ಯ ಹೆಗಡೆ 620/625 (ಮೊದಲಿನ ಅಂಕ 617/625) ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ, ಅಭಿರಾಮ್ ವಿ 618/625 (ಮೊದಲಿನ ಅಂಕ 615/625) ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪಾಲಕರು ಅಭಿನಂದಿಸಿದ್ದಾರೆ.