ಯಲ್ಲಾಪುರ: ಕೃಷಿಕೂಲಿಕಾರರ ಕೊರತೆ ಇರುವುದರಿಂದ ಕೃಷಿ ಕೆಲಸ ಕಾರ್ಯದಲ್ಲಿ ಹೊಸ ಹೊಸ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಹಾಗಾಗಿ ಕೊನೆ ಕೊಯ್ಲು ಮತ್ತು ಮದ್ದು ಸಿಂಪರಣೆಗೆ ಈ ಕಾರ್ಬನ್ ಫೈಬರ್ ದೋಟಿಯು ಅನುಕೂಲವಾಗಿರುತ್ತದೆ ಎಂದು ಉಮ್ಮಚಗಿ ಶ್ರೀ ಸರ್ವಜ್ಞೇಂದ್ರ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಗುರುಪ್ರಸಾದ ಭಟ್ಟ ಹೇಳಿದರು.
ಅವರು ಮಂಗಳವಾರ ಜಿ. ಪಂ,ಗ್ರಾ. ಪಂ.ಹಾಸಣಗಿ, ಹಾಸಣಗಿ ಗ್ರೂಪ್ ಸೇವಾಸಹಕಾರಿ ಸಂಘ, ಸರ್ವಜ್ಞೇಂದ್ರ ರೈತ ಉತ್ಪಾದಕ ಸಂಸ್ಥೆ ಉಮ್ಮಚಗಿ, ತೋಟಗಾರಿಕಾ ಹಾಗೂ ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಹಾಸಣಗಿ ಪಂಚಾಯತ ವ್ಯಾಪ್ತಿಯ ಹೊನ್ನಳ್ಳಿ ಮೋಹನ ಭಟ್ಟರ ತೋಟದಲ್ಲಿ ನಡೆದ ಕಾರ್ಬನ್ ಫೈಬರ್ ದೋಟಿ ಮೂಲಕ ಮದ್ದು ಸಿಂಪರಣೆ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಹಾಯಕ ತೋಟಗಾರಿಕೆ ಅಧಿಕಾರಿ ಸತೀಶ ಹೆಗಡೆ ಮಾತನಾಡಿ,”ಸರಕಾರದಿಂದ ಮಾನ್ಯತೆ ಪಡೆದ ಕಂಪನಿಗಳ ಕಾರ್ಬನ್ ಫೈಬರ್ ದೋಟಿ ಖರೀದಿಸುವವರಿಗೆ ಸಬ್ಸಿಡಿ ವ್ಯವಸ್ಥೆ ಮಾಡಿಕೊಡುತ್ತದೆ. ಈ ದೋಟಿಗಳು ಕೊನೆ ಕೊಯ್ಲು ಮತ್ತು ಮದ್ದು ಸಿಂಪರಣೆಗೆ ಹೆಚ್ಚು ಅನುಕೂಲವಾಗಿದ್ದು, ಇದರ ಉಪಯೋಗದಿಂದ ರೈತರು ಹಣ ಮತ್ತು ಶ್ರಮ ಎರಡರ ವ್ಯಯವನ್ನೂ ಕಡಿಮೆ ಮಾಡಿಕೊಳ್ಳಬಹುದಾಗಿದೆ” ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಟಿ.ಎಸ್. ಎಸ್.ನ ಸಂದೇಶ ಭಟ್ಟ, ಪ್ರಸನ್ನ ಹೆಗಡೆ, ಶ್ರೀಕೃಷ್ಣ ಭಟ್ಟ ಆನ್ಗೋಡ ಭಾಗವಹಿಸಿದ್ದರು.ಹಾಸಣಗಿ ಸೇವಾಸಹಕಾರಿ ಸಂಘದ ಉಪಾಧ್ಯಕ್ಷ, ಟಿ.ವಿ.ಹೆಗಡೆ ಬೆದೆಹಕ್ಲು, ತೋಟಗಾರಿಕಾ ಇಲಾಖೆಯ ಅಧಿಕಾರಿ ಹೀನಾ ಮೇಡಂ,ಪ್ರಮುಖರಾದಕೀರ್ತಿ ಹೆಗಡೆ, ಮೋಹನ್ ಭಟ್ಟ ಹೊನ್ನಳ್ಳಿ ಮುಂತಾದವರು ಇದ್ದರು.