
ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ‘ವಿಶ್ವದರ್ಶನ ಸೇವಾ’ ತಂಡದ ವತಿಯಿಂದ ನೆರೆ ಸಂತ್ರಸ್ಥರಿಗೆ ನೆರವು ನೀಡಲಾಯಿತು.
ಅದರಲ್ಲಿಯೂ ಮುಖ್ಯವಾಗಿ ನೆರೆ ಹಾವಳಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಕಾರ್ಯಾಚರಣೆಗಿಳಿದವರ ಬೆನ್ನೆಲುಬಾಗಿ ವಿಶ್ವದರ್ಶನ ಸೇವಾ ತಂಡ ನಿಂತಿದೆ. ಶುಕ್ರವಾರ ಸಂಜೆ ಭೂ ಕುಸಿತಕ್ಕೆ ಒಳಗಾಗಿದ್ದ ಕಳಚೆ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದ ತಂಡದ ಸದಸ್ಯರು ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು. ನಂತರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರಿಗೆ ಉಪಹಾರ ವಿತರಿಸಿದರು. ಶನಿವಾರ ಮಧ್ಯಾಹ್ನ ಯಲ್ಲಾಪುರ- ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದ ಲಾರಿ ಚಾಲಕರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು. ಈ ವೇಳೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ವಿವಿಧ ಇಲಾಖೆಯ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳ ಚಾಲಕರಿಗೆ ಊಟದ ವ್ಯವಸ್ಥೆ ಮಾಡಿದರು.
ಪ್ರಸ್ತುತ ಎದುರಾಗಿರುವ ನೆರೆ ಪ್ರವಾಹವನ್ನು ಎದುರಿಸಿ ಮಾನವೀಯ ನೆಲೆಯಲ್ಲಿ ಸಂತ್ರಸ್ಥರಿಗೆ ಸಹಾಯ ಮಾಡಲು ವಿಶ್ವದರ್ಶನ ಸೇವಾ ಸಂಸ್ಥೆ ವಿಶೇಷ ತಂಡ ರಚಿಸಿದೆ. ‘ವಿಶ್ವದರ್ಶನ ಸೇವಾ’ ಮೂಲಕ ಸಂತ್ರಸ್ಥರಿಗೆ ಸಹಾಯ ಮಾಡಲು ಈ ತಂಡ ಬದ್ಧವಾಗಿದೆ. ಸಹಾಯದ ಅಗತ್ಯವಿರುವವರು 7337875279 ಅಥವಾ 8747017169ಗೆ ಕರೆ ಮಾಡುವಂತೆ ವಿಶ್ವದರ್ಶನ ಆಡಳಿತ ಮಂಡಳಿ ತಿಳಿಸಿದೆ.