ಶಿರಸಿ: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ, ಹಿಂದೂ ದೇವಾಲಯಗಳ ಸ್ವಾಯತ್ತತೆಗೆ ಭಂಗಬರದಂತೆ ಹೊಸ ಕಾನೂನನ್ನು ರಚಿಸುವ ಕುರಿತು ಸರಕಾರವನ್ನು ಒತ್ತಾಯಿಸಲು ಜೂ.12ರಂದು ಬೆಳಿಗ್ಗೆ 10.30ಕ್ಕೆ ತೋಟಗಾರ ಕಲ್ಯಾಣ ಮಂಟಪದಲ್ಲಿ ಉತ್ತರಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾ ಮಂಡಳದಿಂದ ಮಹಾಸಭೆ ಏರ್ಪಡಿಸಲಾಗಿದೆ ಎಂದು ಮಹಾಮಂಡಳದ ಕಾರ್ಯಧ್ಯಕ್ಷ ಹಾಗೂ ಮಾರಿಕಾಂಬಾ ದೇವಾಲಯದ ಅಧ್ಯಕ್ಷ ರವೀಂದ್ರ ಜಿ.ನಾಯ್ಕ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರಕಾರ ಮಟ್ಟದಲ್ಲಿ ಕೈಗೊಳ್ಳಬೇಕಾದ ಪ್ರಯತ್ನಗಳು ಮತ್ತು ನ್ಯಾಯಾಲಯದ ಮೂಲಕ ನಡೆಸುವ ಹೋರಾಟದ ರೂಪುರೇಷೆಗಳ ಬಗ್ಗೆ ಮಠಾಧೀಶರು, ಧಾರ್ಮಿಕ ಮುಖಂಡರು, ದೇವಾಲಯಗಳ ಧರ್ಮದರ್ಶಿಗಳು, ಮೊಕ್ತೇಸರರು, ಸಂಘಟಕರು, ಕಾನೂನು ತಜ್ಞರು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಸಭೆಯ ಸಾನಿಧ್ಯವನ್ನು ಸ್ವರ್ಣವಲ್ಲಿಯ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಹುಬ್ಬಳ್ಳಿ ದಯಾನಂದ ಗುರುಕುಲದ ಚಿದ್ರೂಪಾನಂದ ಸರಸ್ವತೀ ಮಹಾಸ್ವಾಮಿಗಳು, ಸ್ವಾದಿ ಜೈನಮಠದ ಜಗದ್ಗುರು ಅಕಲಂಕಕೇಸರಿ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಜಡೆ ಸಂಸ್ಥಾನ ಮಠದ ಮಹಾಂತ ಮಹಾಸ್ವಾಮಿಗಳು, ಸಿದ್ದಾಪುರ ಶಿರಸಳಗಿ ಮಠದ ಬ್ರಹ್ಮಾನಂದ ಭಾರತೀ ಮಹಾಸ್ವಾಮಿಗಳು ವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾಮಂಡಳದ ಕಾರ್ಯದರ್ಶಿ ಗೋಪಾಲಕೃಷ್ಣ, ಕೃಷ್ಣ ವೈದ್ಯ ಹಾಗೂ ವಿ.ಆರ್.ಹೆಗಡೆ ಮತ್ತಿಘಟ್ಟ ಇದ್ದರು.