ಭಟ್ಕಳ: ಅಪಘಾತ, ಅನಾಥರ ಸೇವೆ ಅಥವಾ ಇನ್ನಾವುದೇ ಸಾಮಾಜಿಕ ಕಾರ್ಯವಿರಲಿ, ಮೊದಲು ನೆನಪಾಗುವುದೇ ಮುಟ್ಟಳ್ಳಿಯ ಮಂಜು ನಾಯ್ಕ ಎಂದರೆ ತಪ್ಪಾಗಲಿಕ್ಕಿಲ್ಲ. ಈಗ ಇವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ‘ಪ್ರಜಾವಾಣಿ’ ಪತ್ರಿಕೆಯು 2022ರ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ.
ಅಪಘಾತ, ಅನಾಹುತ, ಪ್ರಕೃತಿ ವಿಕೋಪ ಸೇರಿದಂತೆ ಏನೇ ಆದರೂ ಮೊದಲು ಕೇಳಿಬರುವ ಹೆಸರು ಮಂಜು ಅವರದ್ದು. ಮಂಜಣ್ಣ ಎಂದೇ ತಾಲೂಕಿನಲ್ಲಿ ಎಲ್ಲರಿಗೂ ಚಿರಪರಿಚಿತರಾಗಿರುವ ಇವರು ಆಪ್ತರಕ್ಷಕನಾಗಿ, ಬಂಧುವಾಗಿ ಮೊದಲು ಸಹಾಯಕ್ಕೆ ಬರುತ್ತಾರೆ. ಎಲೆಮರೆಯ ಕಾಯಿಯಾಗಿ ಸೇವೆ ಸಲ್ಲಿಸುವ ಇವರ ಸಾಧನೆ ಜಿಲ್ಲೆಯನ್ನು ಮೀರಿ ರಾಜ್ಯ ಮಟ್ಟದ ಪ್ರಶಸ್ತಿಗೆ ಗುರುತಿಸುವಂತಾಗಿದ್ದು ನಿಜಕ್ಕೂ ಶ್ಲಾಘನೀಯ.
ತಾಲೂಕಿನ ಮುಟ್ಟಳ್ಳಿ ಪಂಚಾಯತಿ ವ್ಯಾಪ್ತಿಯ ವೆಂಕಟ್ರಮಣ ನಾಯ್ಕ ಹಾಗೂ ಲಕ್ಷ್ಮಿ ದಂಪತಿಯ ಹಿರಿಯ ಮಗನಾದ ಮಂಜು, ತಂದೆ ಅಕಾಲಿಕ ಮರಣದ ನಂತರ ಅನುಕಂಪದ ನೆಲೆಯಲ್ಲಿ ಗ್ರಾಮ ಸಹಾಯಕರಾಗಿ ವೃತ್ತಿ ಆರಂಭಿಸಿದರು. ಅತ್ತ ಅರೆಕಾಲಿಕ ವರದಿಗಾರನಾಗಿಯೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ಜನರ ಸೇವೆಗೆ ಮುಂಚೂಣಿಯಲ್ಲಿ ಕಾಣುತ್ತಾರೆ. ಅನಾಥ ಶವಗಳ ಸ್ಥಳಾಂತರ, ಅಪಘಾತದಲ್ಲಿ ಗಾಯಗೊಂಡವರನ್ನು ಮಣಿಪಾಲ, ಉಡುಪಿ, ಮಂಗಳೂರು ಆಸ್ಪತ್ರೆಯವರೆಗೆ ಚಿಕಿತ್ಸೆಗೆ ಕರೆದೊಯ್ಯುವ, ಪರ ಊರಿನಿಂದ ಬಂದು ಹಣವಿಲ್ಲದೆ ಪರದಾಡುವ ಪ್ರಯಾಣಿಕರಿಗೆ ಹಣ ನೀಡಿ, ಊಟ- ತಿಂಡಿ ವ್ಯವಸ್ಥೆ ಮಾಡಿ ಊರಿಗೆ ತಲುಪಿಸಿರುವ ಅದೆಷ್ಟೋ ಉದಾಹರಣೆಗಳಿವೆ.
ಕೊರೋನಾ ವೇಳೆಯಲ್ಲಿ ಕೊರೋನಾ ವಾರಿಯರ್ ಆಗಿ ಸಾವಿರಾರು ಜನರ ಹಸಿವನ್ನು ನೀಗಿಸಲು ಹಲವು ಸಂಘ- ಸಂಸ್ಥೆಗಳ ಮೂಲಕ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಕೋವಿಡ್ ಪೀಡಿತರ ಮನೆಗೆ ತೆರಳಲು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ಅವರ ಮನೆಗಳಿಗೆ ಸಂಘ- ಸಂಸ್ಥೆಗಳ ಸಹಾಯದಿಂದ ತೆರಳಿ ಧವಸ- ಧಾನ್ಯಗಳನ್ನು ವಿತರಿಸಿದ್ದಾರೆ. ರಕ್ತದಾನ, ಶ್ರಮದಾನ, ಅನಾಥ ವ್ಯಕ್ತಿಗಳ ಚಿಕಿತ್ಸೆಗೆ ನೆರವಾಗುವುದರಲ್ಲಿ ಮುಂಚೂಣಿ ವ್ಯಕ್ತಿ ಇವರು. ಸರ್ಕಾರಿ ಆಸ್ಪತ್ರೆಯಲ್ಲಿ ವಾರಸುದಾರರಿಲ್ಲದೆ ಮೃತಪಟ್ಟ, ಕೋವಿಡ್ನಿಂದಾಗಿ ಮೃತಪಟ್ಟ ಹಲವು ಅನಾಥ ಶವಗಳಿಗೆ ಮುಕ್ತಿ ನೀಡಿದ ಪುಣ್ಯದ ಕೆಲಸ ಮಾಡಿದವರು. ಬುದ್ಧಿಮಾಂದ್ಯ ಮಕ್ಕಳು, ಭಿಕ್ಷುಕರಿಗೆ ಸಹಾಯ ಹಸ್ತ ಚಾಚಿದವರು. ಹೀಗೆ ಹಗಲು ರಾತ್ರಿಯೆನ್ನದೇ ತಮ್ಮನ್ನು ಸಮಾಜದ ಸೇವೆಗೆ ಮುಡಿಪಾಗಿಟ್ಟವರು ಮಂಜು.
ಈಗಾಗಲೇ ಇವರನ್ನು ಸಾಕಷ್ಟು ಸಂಘ- ಸಂಸ್ಥೆಗಳು, ತಾಲೂಕಾಡಳಿತ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿದ್ದು, ಈಗ ಈ ಸಾಲಿಗೆ ಕನ್ನಡಿಗರ ಸಾಕ್ಷಿ ಪ್ರಜ್ಞೆ, ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯ ಈ ವರ್ಷದ ಸಾಧಕ- 2022ರ ಗರಿಮೆಯು ಸೇರ್ಪಡೆಯಾಗಿದೆ. ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ವೇಳೆ ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕøತ ಡಾ.ರಾಜನ್ ದೇಶಪಾಂಡೆ, ಬ್ಯೂರೋ ಮುಖ್ಯಸ್ಥರಾದ ರಶ್ಮಿ, ಪ್ರಜಾವಾಣಿ ಪತ್ರಕರ್ತರಾದ ಓದೇಶ, ಕೃಷ್ಣಿ ಶಿರೂರು, ರಾಮಕೃಷ್ಣ ಸಿದ್ರಪಾಲ, ನಾಗರಾಜ್ ಮುಂತಾದವರಿದ್ದರು. ಪ್ರಜಾವಾಣಿಯ ಆಯ್ಕೆಗೆ ಭಟ್ಕಳಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಶಸ್ತಿಗೆ ಭಾಜನರಾದ ಮಂಜು ಅವರಿಗೂ ಅಭಿನಂದಿಸಿದ್ದಾರೆ.