ಕಾರವಾರ: ವಿಶ್ವ ಪರಿಸರ ದಿನದ ಅಂಗವಾಗಿ ಪ್ಲಾಸ್ಟಿಕ್ಸ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್, ರಾಯಲ್ ಎನ್ಫೀಲ್ಡ್ ಮತ್ತು ಸರಕಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಹಾಗೂ ಬದುಕು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ನಗರದ ಅಲಿಗದ್ದಾ ಬೀಚ್ ಸ್ವಚ್ಛತಾ ಕಾರ್ಯ ಭಾನುವಾರ ನಡೆಯಿತು.
ವಿಶ್ವ ಪರಿಸರ ದಿನದ ನಿಮಿತ್ತ ನಮ್ಮ ಕಡಲ ಕಿನಾರೆಯನ್ನು ಸ್ವಚ್ಛವಾಗಿಸಿರಿಸಿಕೊಂಡು ನಮ್ಮ ಸಮುದ್ರವನ್ನು ಸಂರಕ್ಷಿಸುವ ಸಂದೇಶವನ್ನು ಸಾರುವ ಸಲುವಾಗಿ ಆಯೋಜಿಸಿದ್ದ ಈ ಸ್ವಚ್ಛತಾ ಕಾರ್ಯದಲ್ಲಿ ಒಟ್ಟು 150 ಸ್ವಯಂಸೇವಕರು ಕರಾವಳಿಯ 4 ಕಿ.ಮೀ. ಉದ್ದಕ್ಕೂ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಸುಮಾರು 1 ಟನ್ ತ್ಯಾಜ್ಯ ಸಂಗ್ರಹಿಸಿದರು. ಸ್ವಯಂಸೇವಕರಲ್ಲಿ ಕಾಲೇಜು ವಿದ್ಯಾರ್ಥಿಗಳು, ಸ್ವಯಂಸೇವಕರು ಹಾಗೂ ಸಾರ್ವಜನಿಕರಿಂದ ಕಡಲತೀರದುದ್ದಕ್ಕೂ ಸ್ವಚ್ಛತೆ ಕೈಗೊಂಡರು.
ಸ್ವಚ್ಛತಾ ಸ್ವಯಂಸೇವಕರು ಸಂಗ್ರಹಿಸಿದ ತ್ಯಾಜ್ಯದಲ್ಲಿ ಯಾವ ವಸ್ತುಗಳು ಅಧಿಕ ಮತ್ತು ಕಡಿಮೆ ಪ್ರಮಾಣದಲ್ಲಿವೆ ಎಂಬುದನ್ನು ಗುರುತಿಸಲಾಗಿದೆ ಎಂದು ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್ ತಿಳಿಸಿದೆ.
ಬೀಚ್ ಸ್ವಚ್ಛತೆ ಅಭಿಯಾನದ ಜತೆಗೆ ಬದಲಾಗುತ್ತಿರುವ ಹವಾಮಾನ, ಗ್ರಹಿಕೆಗಳು ಮತ್ತು ವರ್ತನೆಗಳ ಬಗ್ಗೆ ಸ್ವಯಂಸೇವಕರ ಜತೆಗೆ ಸಂವಾದ ನಡೆಸಲಾಗಿದ್ದು, ಸಮುದ್ರದ ಕಸ ಮತ್ತು ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಅರಿವು ಮೂಡಿಸಲಾಗಿದೆ. ಈ ಸ್ವಚ್ಛತಾ ಚಟುವಟಿಕೆಗಳ ಸರಣಿಯು ಪಿಎಲ್ಸಿ ಫೌಂಡೇಷನ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನಡುವಿನ ನಿಕಟ ಸಹಭಾಗಿತ್ವದ ಲ್ಲಿ ಪ್ರಮುಖ ಮೈಲುಗಲ್ಲು ಎನಿಸಿದ್ದು, ಸಾಗರ ಪರಿಸರ ಶಿಕ್ಷಣದಲ್ಲಿ ವಿಸ್ತೃತ ಸಹಕಾರದ ನಿಟ್ಟಿನಲ್ಲಿ ಇದು ದೊಡ್ಡ ಹೆಜ್ಜೆ ಎನಿಸಿದೆ ಎಂದು ತಿಳಿಸಿದೆ.
ಈ ಚಟುವಟಿಕೆಗಳ ಮೂಲಕ, ಸಮುದಾಯದ ಸದಸ್ಯರು ಸಮುದ್ರದ ತಿರಸ್ಕಾರ ಸಮಸ್ಯೆಯ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಬಹುದು ಹಾಗೂ ಆ ಮೂಲಕ ಮೂಲದಲ್ಲೇ ತ್ಯಾಜ್ಯವನ್ನು ಕಡಿಮೆ ಮಾಡುವುದು, ಸಾಗರ ಸಂರಕ್ಷಣೆ ಮತ್ತು ಬೀಚ್ಗಳನ್ನು ಸ್ವಚ್ಛವಾಗಿಡುವುದು ಹೀಗೆ ನಮ್ಮ ನಡವಳಿಕೆಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಸರವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.