ಶಿರಸಿ: ವಿಶ್ವ ಪರಿಸರ ದಿನಾಚರಣೆ ಶಿರಸಿ ಬಳಿಯ ಪಂಚಲಿಂಗ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿಶಿಷ್ಟವಾಗಿ ಆಚರಿಸಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಪರಿಸರವೇ ನಮ್ಮ ಉಸಿರು ಎನ್ನುವ ಧ್ಯೇಯ ವಾಕ್ಯವನ್ನೇ ಉಸಿರನ್ನಾಗಿಸಿಕೊಂಡ ಶಿರಸಿ ತಾಲೂಕಿನ ಪಂಚಲಿಂಗ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಅರ್ಥ ಪೂರ್ಣ ವಾಗಿ ಆಚರಿಸಿದ್ದು ವಿಶೇಷವೆನಿಸಿತು. ಸಸ್ಯ ಶ್ಯಾಮಲೆಗೆ ಸಸ್ಯ ಮಾಲೆ ತೊಡಿಸುವ ಧಾವಂತ ಶಾಲಾ ಮಕ್ಕಳಲ್ಲಿ ಕಂಡುಬಂದಿತು. ವನದೇವತೆಯ ಪೂಜೆಮಾಡಿ ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು, ಶಾಲಾ ಸಮಿತಿಯವರು ಮುಖ್ಯಾಧ್ಯಾಪಕಿ ಶೋಭಾ ಕಾನಡೆಯವರ ನೇತೃತ್ವದಲ್ಲಿ ಬೀಜದಾನ ಚಳುವಳಿಯ ಹೆಸರಲ್ಲಿ ಜಾಥಾ ಹೊರಟು ಊರಿನ ಹತ್ತಾರು ಮನೆಗಳನ್ನು ತಲುಪಿ ಬೀಜವನ್ನು ಪಡೆದುಕೊಂಡು ಶಾಲೆಗೆ ತಂದು ಬೀಜದುಂಡೆ ತಯಾರಿಸಿದರು.
ಅರಣ್ಯ ಇಲಾಖೆಯ ಸಹಕಾರದೊಂದಿಗೆ ಶಾಲೆಯ ಆವಾರದಲ್ಲಿ ಗಿಡಗಳನ್ನು ನೆಡಲಾಯಿತು. ಇದರ ಜೊತೆ ಪರಿಸರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ ಘೋಷಣೆ ಬರೆ ಯುವ ಸ್ಪರ್ಧೆ, ಕವನಗಳನ್ನು ಬರೆಯುವ ಸ್ಪರ್ಧೆ, ಚಿತ್ರಕಲೆ, ಕ್ವಿಜ್ ನಡೆಯಿತು. ನಂತರ ಊರಿನಲ್ಲಿ ಜಾಥಾ ಮಾಡಿದ ಮಕ್ಕಳು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆಯ ಹಾನಿಯ ಕುರಿತು ಅರಿವನ್ನು ತಂದರು. ದಯವಿಟ್ಟು ಪ್ಲಾಸ್ಟಿಕನ್ನು ಬಳಸಬೇಡಿ ಎಂದು ಅಂಗಡಿಕಾರರಲ್ಲಿ ಮಕ್ಕಳು ವಿನಂತಿಸಿದ್ದು ಮನಸೆಳೆಯಿತು.