ಶಿರಸಿ:ದಾಸನಕೊಪ್ಪದಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳಾದ ನಾಗಪ್ಪ ಕೆ. ಕೆರಿಯಮ್ಮ ದೇವರ ಮನೆಯ ಆವಾರದಲ್ಲಿ ಗ್ರಾಹಕರ ಸೇವಾ ಕೇಂದ್ರವನ್ನು ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿರಸಿ ಶಾಖೆಯ ಮುಖ್ಯ ಪ್ರಬಂಧಕರಾದ ಜಿ.ಎನ್. ಭಟ್, ಜೀವ ವಿಮೆಯ ಮಹತ್ವವನ್ನು ತಿಳಿಸುತ್ತಾ ಪ್ರೀಮಿಯಂ ಪಾಯಿಂಟ್ನಲ್ಲಿ ಲಭಿಸುವ ವಿವಿಧ ಸೇವೆಗಳ ಕುರಿತು ಬೆಳಕು ಚೆಲ್ಲಿದರು. ಸಂಸ್ಥೆಯಲ್ಲಿನ ಡಿಜಿಟಲ್ ಕ್ರಾಂತಿಯ ಕುರಿತು ವಿವರಿಸಿದರು. ಹಾಗೆಯೇ, ಪರಿಸರ ರಕ್ಷಣೆಯ ಅಗತ್ಯತೆಯನ್ನೂ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಗೀತಾ ಎಸ್. ಆಲೂರು ಇವರು, ಪ್ರತಿಯೊಂದು ಕುಟುಂಬದವರೂ ಜೀವ ವಿಮೆಯನ್ನು ಹೊಂದಿರಬೇಕಾದ ಅವಶ್ಯಕತೆಯನ್ನು ತಿಳಿಸಿದರು. ಪ್ರತಿನಿಧಿಗಳ ಗ್ರಾಹಕಸ್ನೇಹಿ ಸೇವೆಯನ್ನು ಕೊಂಡಾಡಿದರು.
ಅಭಿವೃದ್ಧಿ ಅಧಿಕಾರಿಗಳಾದ ಬಿ.ಜಿ. ಶ್ರೀಧರ ಇವರು ಈ ಪ್ರೀಮಿಯಂ ಪಾಯಿಂಟ್ ದಾಸನಕೊಪ್ಪದ ಜನತೆಗೆ ವರದಾನವಾಗಲಿದೆ ಎನ್ನುತ್ತಾ ಪ್ರತಿನಿಧಿಗಳು ಸಂಸ್ಥೆಯ ಆಧಾರಸ್ತಂಭ ಎಂಬುದನ್ನು ತಿಳಿಸುತ್ತಾ ನಾಗಪ್ಪರವರ ಸೇವಾಪರತೆಯನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ, ಪ್ರತಿಭಾವಂತ ವಿದ್ಯಾರ್ಥಿಗಳಾದ ರಾಮಕೃಷ್ಣ ಸಿ. ಗೌಡಗೇರ, ಹಾಗೂ ಸಾಕ್ಷಿ ಎಸ್ ಶಿಳ್ಳೇರ್ ಇವರನ್ನು ಪುರಸ್ಕರಿಸಲಾಯಿತು. ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಕಾಳಂಗಿ ಸೇವಾ ಸಹಕಾರಿ ಸಂಸ್ಥೆಯ ವ್ಯವಸ್ಥಾಪಕರಾದ ವಿಜಯಕುಮಾರ ಡಿ. ಸಣ್ಣಣ್ಣನವರ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.