ಮುಂಡಗೋಡ: ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಐವರು ವಿದ್ಯಾರ್ಥಿಗಳಿಗೆ ಇನ್ನರ್ವ್ಹೀಲ್ ಕ್ಲಬ್ನಿಂದ ಸನ್ಮಾನ ಕಾರ್ಯಕ್ರಮವನ್ನು ರೋಟರಿ ಶಾಲೆಯಲ್ಲಿ ನಡೆಸಲಾಯಿತು.
ರಾಜ್ಯಕ್ಕೆ 3ನೇ ರ್ಯಾಂಕ್ ಗಳಿಸಿದ ವಿಜೇತಾ ಕಲ್ಮಟ್ಲೇರ್, 5ನೇ ರ್ಯಾಂಕ್ ಗಳಿಸಿದ ಮುಸ್ಕಾನ ಬಂಡಿ ಹಾಗೂ ತಾಲೂಕಿಗೆ 3ನೇ ಸ್ಥಾನ ಗಳಿಸಿದ ಅಸ್ಮಿರಖಾನ್ ಮತ್ತು 4ನೇ ಸ್ಥಾನ ಪಡೆದಿರುವ ಶಿಫಾನ್ ಖಾನ್ ಹಾಗೂ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಮಂಜುನಾಥನನ್ನು ಸನ್ಮಾನಿಸಲಾಯಿತು. ಅಲ್ಲದೇ ಇವರ ಸಾಧನೆಗೆ ಸ್ಫೂರ್ತಿಯಾಗಿ, ಬೆನ್ನೆಲುಬಾಗಿ ನಿಂತಿರುವ ರೋಟರಿ ಶಾಲಾ ಮುಖ್ಯಾಧ್ಯಾಪಕ ಎಸ್.ಎಸ್.ಅಂಗಡಿ ಹಾಗೂ ಅಂದಲಗಿಯ ಸರಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕ ಮಂಜುನಾಥ ಯಾಜಿ ಅವರನ್ನು ಸಹ ಸನ್ಮಾನಿಸಲಾಯಿತು.
ರೋಟರಿ ಶಾಲಾ ಮುಖ್ಯಾಧ್ಯಾಪಕ ಎಸ್.ಎಸ್.ಅಂಗಡಿ ಮಾತನಾಡಿ, ಯಾವಾಗಲೂ ನಮ್ಮ ರೋಟರಿ ಶಾಲೆಯ ವಿದ್ಯಾರ್ಥಿಗಳು ತಾಲೂಕಿಗೆ ಪ್ರಥಮ ಸ್ಥಾನ ಪಡೆಯುತ್ತಾ ಬಂದಿದ್ದಾರೆ. ಮುಂದೆ ಸಹ ಇದನ್ನು ಬಿಟ್ಟು ಕೊಡುವುದಿಲ್ಲ. ಮುಂದಿನ ದಿನಗಳಲ್ಲಿ 625ಕ್ಕೆ 625 ಪಡೆಯುವ ಹಾಗೆ ಪ್ರಯತ್ನಿಸುತ್ತೇವೆ ಎಂದರು.
ಅಂದಲಗಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ಯಾಜಿ ಮಾತನಾಡಿ, ಅತಿ ಬಡತನದಲ್ಲಿ ಇದ್ದ ಮಂಜುನಾಥ ಹೆಚ್ಚು ಅಂಕ ಗಳಿಸಲು ಕಾರಣ ನಮ್ಮ ಶಿಕ್ಷಕರ ವೃಂದ. ಅವರ ಪ್ರಯತ್ನದಿಂದ ಇವನು ಈ ಸಾಧನೆ ಮಾಡಲು ಸಾಧ್ಯವಾಯಿತು. ಓದಿಗೆ ಬಡತನ ಸಿರಿತನ ಎಂಬ ಭೇದವಿಲ್ಲ. ಮಕ್ಕಳು ಚನ್ನಾಗಿ ಶ್ರದ್ಧೆಯಿಂದ ಓದಿದರೆ ಏನನ್ನಾದರೂ ಸಾಧನೆ ಮಾಡಬಹುದು ಎಂದರು.
ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಶಶಿರೇಖಾ ಬೈಜು ಅಧ್ಯಕ್ಷತೆ ವಹಿಸಿ, ಎಲ್ಲರನ್ನು ಸ್ವಾಗತಿಸಿದರು. ಗಿರಿಜಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ಇಂಗಳೆ ವಂದಿಸಿದರು. ಇನ್ನರ್ವ್ಹೀಲ್ ಕ್ಲಬ್ ಸದಸ್ಯರು, ರೋಟರಿ ಶಾಲೆಯ ಶಿಕ್ಷಕರು, ಸಿಬ್ಬಂದಿ ಇದ್ದರು.