ಕಾರವಾರ: ಕೆಲವರು ಪಠ್ಯ- ಪುಸ್ತಕಗಳಲ್ಲಿ ತಮ್ಮ ಪಾಠ ತೆಗೆಯಿರಿ ಎಂದು ಪತ್ರಗಳನ್ನು ಬರೆಯುತ್ತಿದ್ದಾರೆ. ಪಠ್ಯದಲ್ಲಿ ಅವರ ಪಾಠವೇ ಇಲ್ಲ. ಕೆಲವರು ಹೇಳುತ್ತಿರುವುದು ಸತ್ಯ. ಆದರೆ ಬಹಳ ಜನ ತಮ್ಮ ಪಾಠವನ್ನು ಹಾಕಬೇಡಿ ಎಂದು ಹೇಳುತ್ತಿದ್ದಾರೆ, ಅಂಥವರ ಪಾಠವೇ ಇಲ್ಲ. ಇನ್ನು ತೆಗೆಯಿರಿ ಎಂದರೆ ಎಲ್ಲಿಂದ ತೆಗೆಯುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಒಂದು ಸರ್ಕಾರ ಸ್ಥಿರವಾಗಿ, ಜನಪರವಾಗಿ ಹೊಸ ಯೋಜನೆಗಳನ್ನ, ಹೊಸ ಯೋಚನೆಗಳನ್ನ, ರಾಷ್ಟ್ರೀಯತೆಯನ್ನ ಬಿಂಬಿಸುವ ವಾತಾವರಣ ನಿರ್ಮಿಸಲು ಪಠ್ಯ- ಪುಸ್ತಕಗಳು ಕೂಡ ಒಂದು ವ್ಯವಸ್ಥೆ. ಪಠ್ಯ- ಪುಸ್ತಕಗಳಲ್ಲಿ ರಾಷ್ಟ್ರೀಯತೆ, ರಾಷ್ಟ್ರಭಕ್ತಿ ತುಂಬುವುದು ತಪ್ಪಲ್ಲ. ಪಠ್ಯ- ಪುಸ್ತಕದ ಪರಿಷ್ಕರಣೆಯಾಗುತ್ತಿರುವುದು ಹೊಸತೂ ಅಲ್ಲ. ಅನೇಕ ಬಾರಿ ಪಠ್ಯ- ಪುಸ್ತಕಗಳ ಬದಲಾವಣೆಯಾಗಿದೆ. ನಾನು ಓದುವಾಗ ಈಶ್ವರ, ಗಣಪತಿಯ ಚಿತ್ರಗಳು ಪಠ್ಯದಲ್ಲಿದ್ದವು. ಆದರೆ ಅಂದಿನ ಈ ಪುಸ್ತಕಗಳನ್ನು ಬದಲಾಯಿಸಿದವರು ಯಾರು? ಎಂದು ಪ್ರಶ್ನಿಸಿದರು.
ಬ್ರಹ್ಮಶ್ರೀ ನಾರಾಯಣಗುರುಗಳ, ಭಗತ್ ಸಿಂಗ್ ಪಾಠವನ್ನು ತೆಗೆದು ಹಾಕಲಾಗಿದೆ ಎಂದು ಒಮ್ಮೆ ಬೊಬ್ಬೆ ಹಾಕಿದರು. ನಾನೇ ಅದಕ್ಕೆ ಸ್ಪಷ್ಟನೆ ನೀಡಿದೆ. ಕೆಲವು ಸಾಹಿತಿಗಳು, ಬುದ್ಧಿಜೀವಿಗಳು, ವಿಚಾರವಾದಿಗಳು ಇದರಲ್ಲಿ ಕೈಯಾಡಿಸುವ ವಾತಾವರಣ ಹಿಂದೂ ಇತ್ತು. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿ ಕೆಲವು ಅತಿ ಶ್ರೇಷ್ಠರು ಅವರಿಗೆ ಸಿಕ್ಕ ಪ್ರಶಸ್ತಿಗಳನ್ನು ವಾಪಸ್ಸು ಮಾಡಿರುವದನ್ನ ನಾನೇ ಸದನದಲ್ಲಿ ಪ್ರಶ್ನೆ ಮಾಡಿದ್ದೆ. ಯಾವ ಸಾಹಿತಿಗಳು ಅವರಿಗೆ ಸಿಕ್ಕ ಶ್ರೇಷ್ಠ ಪ್ರಶಸ್ತಿಗಳನ್ನು ವಾಪಸ್ಸು ಮಾಡಿದ್ದಾರೆ ಎಂದು ಕೇಳಿದಾಗ, ಅವರು ಪತ್ರಿಕೆಯಲ್ಲಿ ಹೇಳಿದ್ದಾರೆ. ಜೆರಾಕ್ಸ್ ಕಾಪಿ ಮಾತ್ರ ಕಳುಹಿಸಿಕೊಟ್ಟಿದ್ದಾರೆ. ನಗದು ಬಹುಮಾನವನ್ನಾಗಲಿ, ಪ್ರಶಸ್ತಿಯನ್ನಾಗಲಿ ವಾಪಸ್ಸು ಮಾಡಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ನನಗೆ ಉತ್ತರ ನೀಡಿದರು ಎಂದರು.
ಹುಯಿಲೆಬ್ಬಿಸುವ ವಾತಾವರಣ, ಗುಮ್ಮನ ಬಿಟ್ಟು ಹೆದರಿಸುವುದು ಅವತ್ತೇ ನಡೆದಿತ್ತು, ಇವತ್ತು ಕೂಡ ನಡೆಯುತ್ತಿದೆ. ಪಠ್ಯ- ಪುಸ್ತಕದ ವಿಚಾರದಲ್ಲಿ ಯಾವುದೇ ಚರ್ಚೆಗೆ ಅವಕಾಶಗಳಿಲ್ಲ. ಕೆಲವರು ಪಠ್ಯ- ಪುಸ್ತಕಗಳಲ್ಲಿ ತಮ್ಮ ಪಾಠ ತೆಗೆಯಿರಿ ಎಂದು ಪತ್ರಗಳನ್ನು ಬರೆಯುತ್ತಿದ್ದಾರೆ. ಪಠ್ಯದಲ್ಲಿ ಅವರ ಪಾಠವೇ ಇಲ್ಲ. ಕೆಲವರು ಹೇಳುತ್ತಿರುವುದು ಸತ್ಯ. ಆದರೆ ಬಹಳ ಜನ ತಮ್ಮ ಪಾಠವನ್ನು ಹಾಕಬೇಡಿ ಎಂದು ಹೇಳುತ್ತಿದ್ದಾರೆ. ಅವರ ಪಾಠವೇ ಇಲ್ಲ ಎಂದರು.
ಪಠ್ಯ- ಪುಸ್ತಕ ಇರುವುದು ಮಕ್ಕಳಿಗೆ ರಾಷ್ಟ್ರೀಯತೆ, ರಾಷ್ಟ್ರಭಕ್ತಿಗೆ ಸಂಬಂಧಿಸಿದಂತೆ ವಿಚಾರಗಳನ್ನು ಕೊಡುವುದು ನಮ್ಮ ಸರ್ಕಾರದ ಗುರಿ. ಅದರಲ್ಲಿ ಹಿಂದೆ ಹೆಜ್ಜೆ ಇಡುವ ಪ್ರಶ್ನೆಯೇ ಇಲ್ಲ. ಎಲ್ಲರ ಸಲಹೆಗಳನ್ನೂ ಕೇಳುತ್ತೇವೆ, ಸರಿಯಾದುದನ್ನೇ ಕೊಡುತ್ತೇವೆ. ಪಠ್ಯ- ಪುಸ್ತಕ ಯಾವ ಕಾರಣಕ್ಕೂ ಮಕ್ಕಳ ಕೈಗೆ ಸಿಗಬಾರದು. ಸರ್ಕಾರವನ್ನು ಇದರ ಆಪಾದಿತ ಸ್ಥಾನದಲ್ಲಿ ನಿಲ್ಲಿಸಬೇಕೆಂಬ ತಂತ್ರ ಈ ಹುಯಿಲೆಬ್ಬಿಸಿರುವವರ ಉದ್ದೇಶವಾಗಿದೆ. ಇದರಿಂದಾಗಿ ಪುಸ್ತಕಗಳ ವಿತರಣೆ ತಡವಾಗಿದೆ. ಆದರೆ ಸಕಾಲದಲ್ಲಿ ಪುಸ್ತಕಗಳನ್ನು ವಿತರಿಸುತ್ತೇವೆ ಎಂದು ಭರವಸೆ ನೀಡಿದರು.
ಹಿಜಾಬ್ ಹಾಕಿಕೊಂಡು ಬಂದಿದ್ದೇ ಅಶಾಂತಿ ಸೃಷ್ಟಿಸುವುದಕ್ಕಾಗಿ: ಹಿಜಾಬ್ ವಿಚಾರ ನಮ್ಮ ಸರ್ಕಾರದಲ್ಲಿ ಮುಗಿದು ಹೋದ ಅಧ್ಯಾಯ. ಹಿಜಾಬ್ ಹಾಕಿಕೊಂಡು ಬಂದಿದ್ದೇ ಅಶಾಂತಿ ಸೃಷ್ಟಿಸುವುದಕ್ಕಾಗಿ. ಈ ದೇಶದ ನೆಲ- ಜಲ- ಸಂವಿಧಾನವನ್ನ ಸ್ವೀಕರಿಸುತ್ತೇನೆಂಬುವವನು ಕೋರ್ಟ್ ಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ. ಆದೇಶದ ವಿರುದ್ಧ ನಡೆದುಕೊಂಡ ಎಲ್ಲರ ವಿರುದ್ಧವೂ ಕ್ರಮವಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನ ಮಾಡಲು ಎಲ್ಲಾ ಕಡೆ ನಿರ್ದೇಶನ ನೀಡಿದೆ. ಹೀಗಾಗಿ ಯಾವುದೇ ಧರ್ಮ, ಜಾತಿ, ಜನಾಂಗವನ್ನು ನೋಡದೆ ಕೆಲವು ಕಡೆ ಧ್ವನಿವರ್ಧಕಗಳನ್ನು ತೆಗೆದಿದ್ದಾರೆ, ಇನ್ನೂ ಕೆಲವು ಕಡೆ ತೆರವು ಮಾಡುತ್ತಿದ್ದಾರೆ ಎಂದರು. ಯಕ್ಷಗಾನ ಒಂದು ವ್ಯವಸ್ಥೆಯ ನಡುವೆ ನಡೆಯುವ, ಒಂದು ಕಟ್ಟಡದ ವ್ಯಾಪ್ತಿಯಲ್ಲಿ ನಡೆಯುವಂಥದ್ದಲ್ಲ. ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು, ಸೀಮಿತಿ ಶಬ್ದದಲ್ಲಿ ಮಾಡಲಾಗುತ್ತದೆ. ಆದರೂ ಅದಕ್ಕೇನು ವ್ಯವಸ್ಥೆಗಳನ್ನು ಮಾಡಬೇಕೆಂದು ಯೋಚನೆಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿಗೆ ಬಂದವರನ್ನು ಸಕ್ಕರೆಯಂತೆ ಕರಗಿಸಿಕೊಳ್ಳುತ್ತೇವೆ: ಹಾಲಿಗೆ ಸಕ್ಕರೆ ಹಾಕಿದಂತೆ ಬಿಜೆಪಿಗೆ ಬಂದವರನ್ನು ಸಕ್ಕರೆಯಂತೆ ಕರಗಿಸಿಕೊಳ್ಳುತ್ತೇವೆ. ಪೂರ್ವಾಶ್ರಮದಲ್ಲಿ ಲೋಪದೋಷಗಳಿದ್ದರೂ ಪಾರ್ಟಿಗೆ ಬಂದ ಮೇಲೆ ಅವರನ್ನು ಸೈದ್ಧಾಂತಿಕ ವಿಚಾರಗಳ ಚೌಕಟ್ಟಿನಲ್ಲಿ ಸೇರ್ಪಡೆಯಾದವರನ್ನು ಉಳಿಸಿಕೊಳ್ಳುತ್ತೇವೆ ಮತ್ತು ಬೆಳೆಸುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಷ್ಟ್ರ ಕಟ್ಟುವ ಭಾಗವಾಗಿ ಸೃಷ್ಟಿ ಮಾಡಲಾಗಿದೆ ಎಂದು ಅಟಲ್ಜೀ ಹೇಳಿದ್ದರು. ಅಭಿವೃದ್ಧಿ ಕೆಲಸಗಳು ಹಾಗೂ ಸೈದ್ಧಾಂತಿಕ ವಿಚಾರಗಳನ್ನು ಅನುಷ್ಠಾನ ಮಾಡಲು ಅಧಿಕಾರದ ಅವಶ್ಯಕತೆ ಇರುವುದನ್ನೂ ಮರೆಯಲು ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ವರ್ಗದ, ಎಲ್ಲಾ ಮನಸ್ಥಿತಿಯ ಜನರು ಬಿಜೆಪಿಗೆ ಬರುತ್ತಿದ್ದಾರೆ. ಬಿಜೆಪಿಯ ಸಿದ್ಧಾಂತ, ಬಿಜೆಪಿಯ ರಾಷ್ಟ್ರೀಯತೆಯನ್ನು ಒಪ್ಪುವವರಿಗೆ ಎಂದಿಗೂ ಪಕ್ಷದ ಬಾಗಿಲು ತೆರೆದಿರುತ್ತದೆ ಎಂದರು.
ವಿಚಾರ ಒಪ್ಪಿ ಬಂದವರಿಗೆ ಬಾಗಿಲು ತೆರೆದಿದ್ದೇವೆ, ಹೋಗುವವರಿಗೂ ಬಾಗಿಲು ತೆರೆದಿದ್ದೇವೆ. ಬರಬಾರದೆಂದು ನಾವು ಯಾರಿಗೂ ಹೇಳಿಲ್ಲ. ರಾಜಕಾರಣ ನಿಂತ ನೀರಲ್ಲ. ಅನೇಕ ಬದಲಾವಣೆಗಳು ಆಗುತ್ತಿರುತ್ತವೆ. ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಯನ್ನೂ ಗುರುತಿಸಿ, ಅವರಿಗೆ ಅಧಿಕಾರ ನೀಡಿದ ಪಕ್ಷ ಬಿಜೆಪಿ. ರಾಜಕಾರಣದಲ್ಲಿ ಟೀಕೆ- ಟಿಪ್ಪಣಿಗಳು ಸಹಜ ಎಂದರು.
ಮಾಜಿ ಸಚಿವ ಆನಂದ್ ಅಸ್ನೋಟಿಕರ್ ತಮ್ಮನ್ನು ಭೇಟಿಯಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಅನೇಕ ಬಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ರಾಜಕೀಯ ಮುಖಂಡರು ಭೇಟಿಯಾಗುವುದು ಸಹಜ. ಅದರಂತೆ ಆನಂದ್ ಅಸ್ನೋಟಿಕರ್ ಬೆಂಗಳೂರಿನಲ್ಲಿ ನನಗೆ ಸಿಕ್ಕಿದ್ದರು. ನಾವು ಸಹಜವಾಗಿ ಭೇಟಿಯಾಗಿ ಮಾತನಾಡಿ, ಫೊಟೊ ಕೂಡ ತೆಗೆಸಿಕೊಂಡೆವು. ಪಾರ್ಟಿಗೆ ಸೇರ್ಪಡೆ ಇದ್ದರೆ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.