ಯಲ್ಲಾಪುರ: ಬದುಕಿನ ಧನ್ಯತೆಯಿರುವುದು ಸತತವಾದ ಪರಿಶ್ರಮದಲ್ಲಿ. ಸಾಮೂಹಿಕ ಏಳಿಗೆಯ ಪ್ರಜ್ಞೆಯಲ್ಲಿ ಬೆಳೆದಾಗ ಮಾತ್ರ ಬದುಕು ಸಾರ್ಥಕವಾಗಬಲ್ಲದು. ನಂಬಿಕೆಯಿಂದ ಬದುಕಿದವರಿಗೆ ಸಾಧನೆ ಸುಲಭವಾಗುವುದು. ಪ್ರಯತ್ನ ತಾಳ್ಮೆ,ಶ್ರದ್ದೆ ಬದುಕನ್ನು ಗೆಲ್ಲಿಸುತ್ತದೆ.
ಆಧುನಿಕತೆಯ ಸವಾಲುಗಳನ್ನು ಎದುರಿಸಲು ನಾವು ಇಂದಿನ ತಂತ್ರಜ್ಞಾನ ವನ್ನು ಬಳಸಬೇಕು. ನಾವು ಪರಿಶುದ್ಧವಾದ ಮನಸ್ಸಿನವರಾದರೆ ಸಕಾರಾತ್ಮಕ ಬೆಳವಣಿಗೆ ಸಾಧ್ಯ. ನಾಳಿನ ಕನಸಿಗೆ ಬಣ್ಣ ಹಚ್ಚುವ ಉಮೇದು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಲು ಬಾಲ್ಯದಲ್ಲಿನ ಶಿಕ್ಷಣ ನೆರವಾಗಬೇಕು ಯಲ್ಲಾಪುರದ ಧಾತ್ರಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕರಾದ ವಿ ಶ್ರೀನಿವಾಸ ಭಟ್ಟ ಹೇಳಿದರು.
ಅವರು ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಮಿತಿಯ ಸರ್ವೋದಯ ಪ್ರೌಢಶಾಲೆಗೆ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲಕರವಾದ ಪೀಠೋಪಕರಣವನ್ನು ಧಾತ್ರಿ ಫೌಂಡೇಶನ್ ನಿಂದ ಹಸ್ತಾಂತರಿಸಿ ಮಾತನಾಡಿದರು.
ಕನಸಿನ ಬದುಕಿಗೆ ಯಾವುದೂ ಕೊರತೆಯಾಗಬಾರದು.ಶಿಕ್ಷಣದಿಂದ ನಾವು ವಂಚಿತರಾಗದಂತೆ ಪ್ರೋತ್ಸಾಹಕವಾದ ಕಾಳಜಿಯನ್ನು ತೋರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಿ.ಶಂಕರ ಭಟ್ ಮಾತನಾಡಿ ಸಾಧನೆಯ ಹಂಬಲ ನಮ್ಮನ್ನು ಸಮಾಜದಲ್ಲಿ ಗುರುತಿಸುತ್ತದೆ. ನಾವು ತ್ಯಾಗಿಗಳಾದಾಗ ಮನುಷ್ಯತ್ವದ ಅನಾವರಣವಾಗಲು ಸಾಧ್ಯ. ಧಾತ್ರಿ ಫೌಂಡೇಶನ್ ನ ಶ್ರೀನಿವಾಸ ಭಟ್ಟ ಮಾನವೀಯ ಕಾಳಜಿಯ ವ್ಯಕ್ತಿಯಾದುದರಿಂದ ಸಮಾಜದ ಅಂತರಂಗದಲ್ಲಿ ದಾಖಲಾಗಿದ್ದಾರೆ. ಸಾಧಕನ ಹಿಂದೆ ಅನುಭವದ ನೆರಳಿರುತ್ತದೆ ಎಂದರು.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆ ನೀಡಿದ ದತ್ತಿನಿಧಿ ವಿತರಿಸಿ ಮಾತನಾಡಿದ ಪಂಚಾಯತ ರಾಜ್ ವಿಕೇಂದ್ರೀಕರಣದ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸೇವಾ ಕಾರ್ಯದಲ್ಲಿ ರಚನಾತ್ಮಕ ಕೆಲಸವು ಒಳ್ಳೆಯ ಪ್ರತಿಫಲವನ್ನು ನೀಡಬಲ್ಲದು.ಸಮಾಜವನ್ನು ಕಟ್ಟುವ ಶಕ್ತಿ ನಾಯಕನಿಗೆ ಇರಬೇಕು. ಗುಣಾತ್ಮಕವಾದ ಸಂಗತಿಗಳು ನಮ್ಮನ್ನು ಬೆಳೆಸಬಲ್ಲದು. ಜೀವನದಲ್ಲಿ ಸಾಧನೆ ಇಲ್ಲದಿದ್ದರೆ ಮನುಷ್ಯ ಜೀವನ ನಿರರ್ಥಕ ಎಂದರು.
ವೇದಿಕೆಯಲ್ಲಿ ಸಂಪನ್ಮೂಲ ಶಿಕ್ಷಕ ವಿನೋದ ಭಟ್ಟ, ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನಾಗೇಂದ್ರ ಹೆಗಡೆ ಕೋಣೆಮನೆ, ಗ.ನಾ ಕೋಮಾರ,ಟಿ ಎನ್ ಭಟ್ಟ,, ಟಿ ಸಿ ಗಾಂವ್ಕಾರ, ರಾಮಚಂದ್ರ ಹೆಗಡೆ ಕೆರೆತೋಟ, ಗಿರೀಶ ಕಂಚೀಮನೆ. ಉಪಸ್ಥಿತರಿದ್ದರು. ಸುಜಿತ್ ಭಟ್ಟ ಪ್ರಾರ್ಥಿಸಿದರು.ಸರ್ವೋದಯ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ ಸ್ವಾಗತಿಸಿದರು. ಶಿಕ್ಷಕ ಎಸ್ ಟಿ ಬೇವಿನಕಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.