ಕುಮಟಾ: ತಾಲೂಕಿನ ಕೊಡ್ಕಣಿ ಗ್ರಾ.ಪಂ ವ್ಯಾಪ್ತಿಯ ಶಶಿಹಿತ್ತಲ ಮತ್ತು ಚಿಪ್ಪಿಬೊಳೆ ಗ್ರಾಮದ ಜನರಿಗೆ ಸರಿಯಾಗಿ ನೀರಿನ ಸೌಲಭ್ಯ ಸಿಗುತ್ತಿಲ್ಲ. ಬೇಸಿಗೆಯಲ್ಲಿ ಬಹಳಷ್ಟು ನೀರಿನ ತೊಂದರೆಯಾಗುತ್ತಿದೆ. ಈ ಎರಡು ಗ್ರಾಮಕ್ಕೆ ಸಮರ್ಪಕ ನೀರಿನ ಪೂರೈಕೆಯಾಗುವಂತೆ ಆಗ್ರಹಿಸಿ, ಆ ಭಾಗದ ಗ್ರಾಮಸ್ಥರು ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.
ಈ ಗ್ರಾಮಕ್ಕೆ ಕೆಲವು ವರ್ಷಗಳಿಂದ ದಿನಬಿಟ್ಟು ದಿನ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ದಿನನಿತ್ಯದ ಉಪಯೋಗಕ್ಕೆ ಸಾಲುತ್ತಿಲ್ಲ. ಪ್ರತಿನಿತ್ಯ ನೀರು ಪೂರೈಸಲು ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೂ, ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಕಳೆದ ವರ್ಷ ಮೇ 19ರಂದು ನೀರಿನ ವ್ಯವಸ್ಥೆ ಮಾಡಲು ಬಗ್ಗೆ ಅಧ್ಯಕ್ಷರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಈ ವರ್ಷ ಮೇ 30ರಂದು ಪುನಃ ಮನವಿ ಸಲ್ಲಿಸಿದಾಗ ಮೇಲಧಿಕಾರಿಗಳ ಜತೆ ಚರ್ಚಿಸಿ, ತಿಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ಗ್ರಾಮದಲ್ಲಿ ಸುಮಾರು 80 ಕುಟುಂಬಗಳು ನೀರಿಗಾಗಿ ಆಹಾಕಾರ ನಡೆಸುತ್ತಿದೆ. ನಮ್ಮ ಬೇಡಿಕೆಗೆ ನಿಖಿತ ಉತ್ತರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೊಡ್ಕಣಿ ಗ್ರಾ.ಪಂ ವ್ಯಾಪ್ತಿಯ ಶಶಿಹಿತ್ತಲ ಮತ್ತು ಚಿಪ್ಪಿಬೊಳೆ ಗ್ರಾಮಸ್ಥರ ಬೇಡಿಕೆಯಂತೆ ಜೂ.4 ರಿಂದ ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತದೆ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಮುಗಿದ ಬಳಿಕ ಅಧಿಕಾರಿಗಳು ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ಸಭೆ ನಡೆಸಿ, ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ಅಧ್ಯಕ್ಷರು ಲಿಖಿತ ರೂಪದಲ್ಲಿ ಭರವಸೆ ನೀಡಿದ ನಂತರ ಪ್ರತಿಭಟನೆ ಮುಕ್ತಾಯಗೊಳಿಸಿದರು.
ಪ್ರತಿಭಟನೆಯಲ್ಲಿ ನಾರಾಯಣ ನಾಯ್ಕ, ಸುನೀಲ ನಾಯ್ಕ, ಬಾಬು ನಾಯ್ಕ, ಗಣಪತಿ ನಾಯ್ಕ, ಮಂಜುನಾಥ ನಾಯ್ಕ, ರೋಹಿಣಿ ನಾಯ್ಕ, ಸಾವಿತ್ರಿ ನಾಯ್ಕ, ಬೇಬಿ ನಾಯ್ಕ, ಸುಮಾ ನಾಯ್ಕ, ರೇವತಿ ನಾಯ್ಕ, ದೀಪಾ ನಾಯ್ಕ, ಶಾಂತಿ ನಾಯ್ಕ ಸೇರಿದಂತೆ ಮತ್ತಿತರರು ಇದ್ದರು.